ತುಮಕೂರು: ಚೆನ್ನೈನ ಡಾ.ರೇಲಾ ಇನ್ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸುಧಾರಿಸಿದೆ. ಮಂಗಳವಾರ ತೀವ್ರ ನಿಗಾಘಟಕದಿಂದ ವಿಶೇಷ ವಾರ್ಡಿಗೆ ಸ್ಥಳಾಂತರಿಸಿದ್ದು, ಇನ್ನೆರಡು ದಿನಗಳಲ್ಲಿ ಮಠಕ್ಕೆ ಮರಳುವ ಸಾಧ್ಯತೆ ಇದೆ.
‘ಸ್ವಾಮೀಜಿ ಅವರನ್ನು ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಸೆಂಟರ್ನ ಮುಖ್ಯಸ್ಥ ಡಾ.ಮಹಮ್ಮದ್ ರೇಲಾ ಹೇಳಿದ್ದಾರೆ’ ಎಂದು ಮಠದ ಕಿರಿಯಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
’ವಿಶೇಷ ವಾರ್ಡಿನಲ್ಲಿ ಸ್ವಾಮೀಜಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಅತೀ ಗಣ್ಯರನ್ನು ಹೊರತುಪಡಿಸಿ ಭಕ್ತರಿಗೆ ಸ್ವಾಮೀಜಿ ಭೇಟಿಗೆ ನಿರ್ಬಂಧ ಮುಂದುವರಿಸಲಾಗಿದೆ' ಎಂದು ಹೇಳಿದ್ದಾರೆ.
ಡಾ.ರೇಲಾ ಅವರಿಗೆ ಸನ್ಮಾನ: ಸ್ವಾಮೀಜಿಯವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಕ್ಕೆ ಡಾ.ಮಹಮ್ಮದ್ ರೇಲಾ ಅವರನ್ನು ರೇಲಾ ಆಸ್ಪತ್ರೆ ಆವರಣದಲ್ಲಿಯೇ ಮಂಗಳವಾರ ತುಮಕೂರಿನ ಭಕ್ತರು ಸನ್ಮಾನಿಸಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಪಿಣ್ಯ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ಡಿ.ಟಿ.ವೆಂಕಟೇಶ್, ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಆಫ್ ಕರ್ನಾಟಕದ (ಸಿ.ಎಂ.ಎ) ತುಮಕೂರು ಜಿಲ್ಲಾ ಘಟಕ ಅಧ್ಯಕ್ಷ ಮುಷ್ತಾಕ್ ಅಹಮ್ಮದ್ ಅವರು ಸನ್ಮಾನಿಸಿದರು. ರಿಜ್ವಾನ್ ಪಾಷಾ, ಮಹಮ್ಮದ್ ಹಫೀಜ್ ನಿಯೋಗದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.