ADVERTISEMENT

ಸ್ವಾಮೀಜಿ ನಿಧನ: ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 16:15 IST
Last Updated 7 ಸೆಪ್ಟೆಂಬರ್ 2020, 16:15 IST

ಮೈಸೂರು: ಕೇರಳದ ಕಾಸರಗೋಡಿನ ಶಂಕರಾಚಾರ್ಯ ಸಂಸ್ಥಾನದ ಎಡನೂರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ನಿಧನಕ್ಕೆ ಕನ್ನಡ ಗೆಳೆಯರ ಬಳಗ ಶ್ರದ್ಧಾಂಜಲಿ ಸಲ್ಲಿಸಿದೆ.

ಸ್ವಾಮೀಜಿ ಕನ್ನಡದ ಆರಾಧಕರಾಗಿದ್ದರು. ಮಠದಿಂದ ಕನ್ನಡ ಮಾಧ್ಯಮದ ಶಾಲೆ ತೆರೆದು ಕಾಸರಗೋಡಿನ ಎಲ್ಲ ಕನ್ನಡಿಗರಿಗೆ ಶಿಕ್ಷಣ ನೀಡಿದ್ದರು. ಶ್ರೀಗಳ ನಿಧನದಿಂದ ಕಾಸರಗೋಡು ‘ಕನ್ನಡದ ಧೀಃಶಕ್ತಿ’ಯನ್ನು ಕಳೆದುಕೊಂಡಂತಾಗಿದೆ ಎಂದು ಬಳಗ ತಿಳಿಸಿದೆ.

ಕಾಸರಗೋಡಿನಲ್ಲಿ ಕನ್ನಡದ ಕಂಪು ಬೀರುವಲ್ಲಿ ರಾಷ್ಟ್ರಕವಿ ಎಂ.ಗೋವಿಂದ ಪೈ, ಸಾಹಿತಿ ಕಯ್ಯಾರ ಕಿಞ್ಞಣ್ಣರೈ ಜೊತೆಗೆ ಕೇಶವಾನಂದ ಭಾರತೀ ಸ್ವಾಮೀಜಿಗಳ ಪಾತ್ರವೂ ಸಾಕಷ್ಟಿದೆ ಎಂದಿದೆ.

ADVERTISEMENT

‘ತುಳು-ಕನ್ನಡ ಎನ್ನುವ ನೆಲೆಯಲ್ಲಿ ಕನ್ನಡ ಚಳವಳಿ ಒಡೆಯವ ಹುನ್ನಾರ ನಡೆದಾಗ ಇಬ್ಬರನ್ನೂ ಒಗ್ಗೂಡಿಸುವಲ್ಲಿ ಸ್ವಾಮೀಜಿ ಯಶಸ್ವಿಯಾಗಿದ್ದರು. ಕೇರಳ ಸರ್ಕಾರ ಕನ್ನಡದ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಸಿದಾಗಲೆಲ್ಲಾ, ನಡೆಯುತ್ತಿದ್ದ ಹೋರಾಟದಲ್ಲಿ ಸ್ವಾಮೀಜಿಯೂ ಇರುತ್ತಿದ್ದರು. ಇವರ ನಿಧನದಿಂದ ಕಾಸರಗೋಡು ಕನ್ನಡ ಚಳವಳಿಯ ಆಧಾರಸ್ತಂಭವೊಂದು ಕಳಚಿದಂತಾಗಿದೆ’ ಎಂದು ಕನ್ನಡ ಗೆಳೆಯರ ಬಳಗ ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.