ADVERTISEMENT

ಕೋವಿಡ್‌ ನಿರ್ವಹಣೆಯಲ್ಲಿ ವಿಫಲ: ಸರ್ಕಾರದ ವಜಾಕ್ಕೆ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2021, 13:11 IST
Last Updated 6 ಮೇ 2021, 13:11 IST
ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಅವರು ಒನಕೆ ಓಬವ್ವ ಪ್ರತಿಮೆಯ ಎದುರು ಗುರುವಾರ ಸಾಂಕೇತಿಕ ಧರಣಿ ನಡೆಸಿದರು.
ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಅವರು ಒನಕೆ ಓಬವ್ವ ಪ್ರತಿಮೆಯ ಎದುರು ಗುರುವಾರ ಸಾಂಕೇತಿಕ ಧರಣಿ ನಡೆಸಿದರು.   

ಚಿತ್ರದುರ್ಗ: ಕೋವಿಡ್‌ ನಿರ್ವಹಣೆಯಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಗುರುವಾರ ಏಕಾಂಗಿ ಧರಣಿ ನಡೆಸಿದರು.

ಇಲ್ಲಿನ ಒನಕೆ ಓಬವ್ವ ಪ್ರತಿಮೆಯ ಎದುರು ಸಾಂಕೇತಿಕ ಧರಣಿ ನಡೆಸಿದ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನರ ಜೀವ ರಕ್ಷಣೆಗೆ ಮಠಾಧೀಶರು ಮುಂದಾಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಕೋವಿಡ್ ಉಲ್ಬಣಿಸಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಹಾಸಿಗೆಗಳನ್ನು ಬ್ಲಾಕ್‌ ಮಾಡುವ ವ್ಯವಸ್ಥೆ ಬಹಿರಂಗವಾಗಿದೆ. ಸಾವು–ನೋವು ನಿಯಂತ್ರಿಸುವಲ್ಲಿ ಕಾಳಜಿ ವಹಿಸಬೇಕಿದ್ದ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು’ ಎಂದು ರಾಜ್ಯಪಾಲರಿಗೆ ಮನವಿ ರವಾನಿಸಿದರು.

ADVERTISEMENT

‘ಕಳೆದ ವರ್ಷ ಸೋಂಕು ಕಾಣಿಸಿಕೊಂಡಾಗ ಸರ್ಕಾರದ ಕಾರ್ಯಕ್ಕೆ ಎಲ್ಲರೂ ಬೆಂಬಲವಾಗಿ ನಿಂತಿದ್ದೆವು. ವರ್ಷ ಕಳೆದರೂ ಕೋವಿಡ್‌ ಎದುರಿಸುವ ಸಿದ್ಧತೆ ಮಾಡಿಕೊಳ್ಳದಿರುವುದು ಅಕ್ಷಮ್ಯ. ಎರಡನೇ ಅಲೆಯ ಸಂದರ್ಭದಲ್ಲಿ ಮಾರಣಹೋಮ ನಡೆಯುತ್ತಿದೆ. ಪ್ರಜೆಗಳನ್ನು ರಕ್ಷಣೆ ಮಾಡಬೇಕಿದ್ದ ಬಿಜೆಪಿ ಸರ್ಕಾರ ಕೈಚಲ್ಲಿ ಕುಳಿತಿದೆ. ಇದು ನಿಜಕ್ಕೂ ವಿಷಾದದ ಸಂಗತಿ’ ಎಂದು ಆರೋಪಿಸಿದರು.

‘ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜುಗಳನ್ನು ಹಲವು ಮಠಗಳು ಹೊಂದಿವೆ. ಆರ್ಥಿಕವಾಗಿಯೂ ಸುಸ್ಥಿತಿಯಲ್ಲಿ ಇವೆ. ಇಂತಹ ಮಠಾಧೀಶರು ತಮ್ಮ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ನೀಡಬೇಕು. ತಲೆಮಾರುಗಳಿಗೆ ಸಾಕಾಗುಷ್ಟು ಸಂಪತ್ತು ಸಂಗ್ರಹಿಸಿದ ರಾಜಕಾರಣಿಗಳು ಕರುಣೆ ತೋರಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.