ADVERTISEMENT

ಚಿಕ್ಕಬಳ್ಳಾಪುರದಲ್ಲಿ ಸ್ಫೋಟ| ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 6:06 IST
Last Updated 23 ಫೆಬ್ರುವರಿ 2021, 6:06 IST
   

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.

ಈ ಕ್ವಾರಿಯನ್ನು ಫೆ. 7 ರಂದು ಮುಚ್ಚಿಸಲಾಗಿತ್ತು. ಅಂದಿನಿಂದ ಕ್ವಾರಿ ಚಾಲನೆಯಲ್ಲಿರಲಿಲ್ಲ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ 'ಭ್ರಮರವರ್ಷಿಣಿ' ಕ್ವಾರಿ ಮಾಲೀಕರು ಜಿಲೆಟಿನ್​ಗಳನ್ನು ಎಲ್ಲಿಯೋ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ. ಪೊಲೀಸ್ ಇಲಾಖೆ ಕಳೆದ ಎರಡು ದಿನಗಳಿಂದ ಕ್ವಾರಿ ಬಳಿ ಪರಿಶೀಲನೆ ನಡೆಸಿದ್ದು, ಬಹುಶಃ ಇದಕ್ಕೆ ಹೆದರಿ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್​ ಅನ್ನು ಗುಡಿಬಂಡೆ ತಾಲ್ಲೂಕಿನ ಕಾಡು ಪ್ರದೇಶದಲ್ಲಿ ಬಿಸಾಡಲು ಟಾಟಾ ಏಸ್ ಹಾಗೂ ಬೈಕ್ ಮೂಲಕ ಒಟ್ಟು 7 ಜನ ಬಂದಿದ್ದರು.

ಬಾಂಬ್ ಸ್ಕ್ವಾಡ್​ ಮಾಹಿತಿಯಂತೆ ಸ್ಫೋಟಕಗಳನ್ನು ಕಾಡು ಪ್ರದೇಶದಲ್ಲಿ ಬಿಸಾಡಲು ಬಂದಿದ್ದ ವೇಳೆ ಮೊಬೈಲ್​ಫೋನ್ ಆನ್​ ಆಗಿ ಸ್ಫೋಟ ಸಂಭವಿಸಿರಬಹುದು. ಅಥವಾ ಸಿಗರೇಟ್ ಸೇದುವ ವೇಳೆ ಸ್ಫೋಟಗೊಂಡಿದೆ ಎಂದು ಬಾಂಬ್​ ಸ್ವ್ಕಾಡ್​ ಪ್ರಾಥಮಿಕ ವರದಿ ನೀಡಿದ್ದಾರೆ. ಈ ಸ್ಫೋಟದಲ್ಲಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಸ್ಥಳೀಯ, ಮತ್ತೋರ್ವ ಬಾಗೇಪಲ್ಲಿ ಮೂಲದವರು, ಮೂವರು ಆಂಧ್ರ ಮೂಲದವರು, ಇನ್ನೋರ್ವ ನೇಪಾಳ ಮೂಲದವ ಎಂದು ತಿಳಿದು ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

ADVERTISEMENT

ಯಾರು ಅಕ್ರಮವಾಗಿ ಸ್ಫೋಟಕಗಳನ್ನು ಸರಬರಾಜು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಆದರೆ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕ್ವಾರಿ ಸ್ಫೋಟ ಪ್ರಕರಣದ ನಂತರ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಅದರ ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಮಾಡಲಾಗಿತ್ತು. ಇದಕ್ಕೆ ಹೆದರಿ ಈ ರೀತಿ ಸ್ಫೋಟಗಳನ್ನು ಸಾಗಿಸಲು ಹೋಗಿ ಈ ದುರಂತ ನಡೆದಿದೆ. ಮಾಲೀಕರೇ ಈ ಪ್ರಕರಣದ ಮೊದಲ ಆರೋಪಿಗಳು, ಅವರ ಮೂಲಕವೇ ಸ್ಫೋಟಕಗಳು ಬಂದಿರುತ್ತವೆ. ಇಂದು ಬಲಿಯಾದವರು ನತದೃಷ್ಟರು ಎಂದು ಸಚಿವ ಡಾ.ಕೆ.ಸುಧಾಕರ್​ ವಿಷಾದ ವ್ಯಕ್ತಪಡಿಸಿದರು.

ಕ್ವಾರಿ ಮಾಲೀಕರು ಬಿಜೆಪಿ ಮುಖಂಡರು ಎಂಬ ಹೇಳಿಕೆಗೆ ಉತ್ತರಿಸಿದ ಸಚಿವ ಸುಧಾಕರ್ , ಅವರು ಯಾವ ಪಕ್ಷ ಎನ್ನುವುದು ಮುಖ್ಯವಲ್ಲ, ಯಾರೇ ಆಗಲಿ ತಪ್ಪಿಸ್ಥರು ತಪ್ಪಿತಸ್ಥರೇ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ

ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟಗೊಂಡು 6 ಜನ ಸಾವನ್ನಪ್ಪಿದ ಹಿನ್ನೆಲೆ ಘಟನಾ ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.