
ಬೆಂಗಳೂರು: ಸಿರಿಗೆರೆಯ ತರಳಬಾಳು ಬೃಹನ್ಮಠದ ಆಸ್ತಿ ಹಾಗೂ ಅಧಿಕಾರ ದುರ್ಬಳಕೆ, ಟ್ರಸ್ಟ್ ಡೀಡ್ ರದ್ದು ಸೇರಿದಂತೆ ಹಲವು ಆರೋಪಗಳಿಗೆ ಸಂಬಂಧಿಸಿ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಅಸಲು ದಾವೆಯಲ್ಲಿ ನೀಡಲಾಗಿರುವ ಮಧ್ಯಂತರ ಅರ್ಜಿಗಳ ಮೇಲಿನ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಹಿರೇಕೆರೂರಿನ ಎಸ್.ಎಸ್.ಪಾಟೀಲ್ ಸೇರಿದಂತೆ ಒಟ್ಟು 8 ಜನ ಸಲ್ಲಿಸಿರುವ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ 28891/2025) ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ. ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರು: ಹಿರೇಕೆರೂರಿನ ಎಸ್.ಎಸ್.ಪಾಟೀಲ್ (80) ಮತ್ತು ಸುಭಾಷ್ಚಂದ್ರ (61), ಹೊನ್ನಾಳಿ ತಾಲ್ಲೂಕು ಬಿದರಗದ್ದೆಯ ಬಿ.ಎಚ್.ಮಂಜಪ್ಪ (68), ಬೆಂಗಳೂರಿನ ಎಂ.ಶಿವಕುಮಾರಸ್ವಾಮಿ (68), ಜಿ.ಎಂ.ಲಿಂಗರಾಜು (67), ಟಿ.ಪಿ.ಕಲ್ಲೇಶ್ (62), ಪಿ.ಕಾಂತರಾಜ್ (54) ಹಾಗೂ ಎಸ್.ಶಿವಕುಮಾರ್ ಮಾಳಿಗೆ (56).
ಪ್ರತಿವಾದಿಗಳು: ತರಳಬಾಳು ಜಗದ್ಗುರು ಬೃಹನ್ಮಠದ ಹಾಲಿ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀಮಠದ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಶ್ರೀ ತರಳಬಾಳು ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಕರಿಬಸಪ್ಪ.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು. ಹೈಕೋರ್ಟ್ ವಕೀಲ ಕೆ.ಶ್ರೀಕಾಂತ್ ಪಾಟೀಲ್ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.