ADVERTISEMENT

ಸಿರಿಗೆರೆ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸರಳ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 11:40 IST
Last Updated 24 ಸೆಪ್ಟೆಂಬರ್ 2020, 11:40 IST
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಂಚಿನ ಪುತ್ತಳಿಗೆ ಗುರುವಾರ ಪುಷ್ಪನಮನ ಸಲ್ಲಿಸಿದರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಂಚಿನ ಪುತ್ತಳಿಗೆ ಗುರುವಾರ ಪುಷ್ಪನಮನ ಸಲ್ಲಿಸಿದರು.   

ಸಿರಿಗೆರೆ (ಚಿತ್ರದುರ್ಗ): ಇಲ್ಲಿನ ತರಳಬಾಳು ಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 28ನೇ ಶ್ರದ್ಧಾಂಜಲಿ ಗುರುವಾರ ಸರಳವಾಗಿ ನೆರವೇರಿತು. ಪೂಜಾ ವಿಧಿವಿಧಾನಗಳು ಐಕ್ಯ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದವು.

ಪ್ರತಿ ವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಶ್ರದ್ಧಾಂಜಲಿ ಸಮಾರಂಭಕೋವಿಡ್‌ ಕಾರಣಕ್ಕೆ ಸರಳ ರೂಪ ಪಡೆಯಿತು. ಸಿರಿಗೆರೆ ಗ್ರಾಮದ ಪ್ರತಿ ಮನೆಯಲ್ಲಿ ಸ್ವಾಮೀಜಿ ಸ್ಮರಣೆ ಜರುಗಿತು.

ಮಠದ ಐಕ್ಯಮಂಟಪದಲ್ಲಿ ಗುರುವಾರ ಬೆಳಗ್ಗೆ 5 ಕ್ಕೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕಂಚಿನ ಪುತ್ಥಳಿಗೆ ಅಭಿಷೇಕ ನೆರವೇರಿತು. ಗುರುಕುಲದ ವಿದ್ಯಾರ್ಥಿಗಳು ವಚನಗೀತೆ ಹಾಡುವ ಮೂಲಕ ಪೂಜಾ ಕೈಂಕರ್ಯ ಪೂರ್ಣಗೊಳಿಸಿದರು.ಐಕ್ಯಮಂಟಪ ಬಾಳೆಕಂದು, ಮಾವಿನ ತೋರಣ ಮತ್ತು ತರಹೇವಾರಿ ಪುಷ್ಪಗಳಿಂದ ಕಂಗೊಳಿಸುತ್ತಿತ್ತು. ಭಕ್ತರ ಸುಳಿವಿಲ್ಲದೇ ಪ್ರಶಾಂತತೆ ಕಾಣುತ್ತಿತ್ತು.

ADVERTISEMENT

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಐಕ್ಯಮಂಟಪಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಕಂಚಿನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ದೀರ್ಘದಂಡ ನಮಸ್ಕಾರ ಹಾಕಿ, ಗುರುಶಾಂತ ದೇಶಿಕೇಂದ್ರ ಸ್ವಾಮೀಜಿಯವರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರನ್ನು ಉದ್ದೇಶಿಸಿ ಅಂತರ್ಜಾಲದ ಮೂಲಕ ಮಾತನಾಡಿದರು.

‘ಸಂಪ್ರದಾಯಿಕ ಆಚರಣೆಯಿಂದ ಸಾಮಾಜಿಕ ಸಂಕಷ್ಟ ಎದುರಾಗಬಾರದು. ಜನಜಂಗುಳಿ ಸೇರದಂತೆ ಶ್ರದ್ಧಾಂಜಲಿಯ ವಿಧಿವಿಧಾನ ಪೂರೈಸಲಾಗಿದೆ. ಹಳೆಯ ಸಂಪ್ರದಾಯ ಬದಿಗೊತ್ತಿ ಸಾಮಾಜಿಕ ಹಿತ ಕಾಪಾಡಲಾಗಿದೆ. ಸಮಾಜದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳನ್ನು ಸರಿಪಡಿಸುವಲ್ಲಿ ಇದೊಂದು ಹೊಸ ಹೆಜ್ಜೆ’ ಎಂದುಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.