ಬೆಂಗಳೂರು: ‘ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಹಾಯವಾಣಿ ಆರಂಭಿಸಲಾಗುವುದು. ಎಲ್ಲ ದೂರುಗಳನ್ನು ವಿವಿಧ ಹಂತಗಳಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘಕ್ಕೆ (ಕೆಆರ್ಎಂಎಸ್ಎಸ್) ಭರವಸೆ ನೀಡಿದ್ದಾರೆ.
‘ದೂರುಗಳನ್ನು ಇ- ಆಡಳಿತ ಮೂಲಕ ಸ್ವೀಕರಿಸಿ ನಿರ್ವಹಿಸುವುದರಿಂದ, ಬಹುತೇಕ ಸಮಸ್ಯೆಗಳು ಶೀಘ್ರ ಪರಿಹಾರ ಸಾಧ್ಯವಾಗಲಿದೆ ಎಂಬುದಾಗಿ ಭರವಸೆ ನೀಡಿದ್ದಾರೆ’ ಎಂದುಆಯುಕ್ತರ ಜೊತೆ ಮಾತುಕತೆ ಬಳಿಕ ಸಂಘ ಹೇಳಿಕೆ ನೀಡಿದೆ.
‘ವರ್ಗಾವಣೆ ಕಾಯ್ದೆ ಬದಲಿಸಿ ಶೀಘ್ರ ಹೊಸ ನಿಯಮಗಳನ್ನು ಜಾರಿಗೆ ತರಲು ಕ್ರಮ ವಹಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರ ವೇತನ ವಿಳಂಬ, ಬೋಧಕ ಮತ್ತು ಬೋಧಕೇತರ ನೌಕರರ ನೇಮಕ ಬಗ್ಗೆಯೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿರುವ ಬಗ್ಗೆಯೂ ಆಯುಕ್ತರು ಮಾಹಿತಿ ನೀಡಿದ್ದಾರೆ’ ಎಂದೂ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.