ಬೆಂಗಳೂರು: ‘ಆರೋಪಿಗಳಿಗೂ ಕಾನೂನಿನ ನೆರವು ಸಿಗುವಂತೆ ನೋಡಿಕೊಳ್ಳುವುದು ಸಾಂವಿಧಾನಿಕ ಆದೇಶ. ಅದು ಈಡೇರುವಂತೆ ನೋಡಿಕೊಳ್ಳುವುದು ನ್ಯಾಯಾಂಗದ ಜವಾಬ್ದಾರಿ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆ ಆದೇಶವನ್ನು ಬದಿಗಿರಿಸಿದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಾಗರಾಜನ್ ಅವರಿದ್ದ ವಿಭಾಗೀಯ ಪೀಠ, ‘ಸಾಕ್ಷಿಗಳ ಪಾಟಿ ಸವಾಲಿಗೆ ಅವಕಾಶ ನೀಡಬೇಕು ಎಂಬ ಆರೋಪಿಯ ಮನವಿಯನ್ನು ಪುರಸ್ಕರಿಸಬೇಕು’ ಎಂದು ತಿಳಿಸಿದೆ.
ಸಾಕ್ಷಿಗಳ ಪಾಟಿ ಸವಾಲಿಗೆ ತಡವಾಗಿ ಅವಕಾಶ ಕೋರಿದ್ದ ಕಾರಣಕ್ಕೆ ಅರ್ಜಿ ತಿರಸ್ಕರಿಸಿದ್ದ ಅಧೀನ ನ್ಯಾಯಾಲಯ, ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿತ್ತು.
‘ಕಾನೂನಿನ ಅಡಿಯಲ್ಲಿ ಪಾಟಿ ಸವಾಲಿಗೆ ಕೇಳಿದ್ದ ಅವಕಾಶ ನಿರಾಕರಿಸುವುದು ನ್ಯಾಯಯುತ ವಿಚಾರಣೆ ಎನಿಸಿಕೊಳ್ಳುವುದಿಲ್ಲ. ಪಾಟಿ ಸವಾಲಿಗೆ ಅವಕಾಶ ನೀಡಿ ಮರು ವಿಚಾರಣೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಅಧೀನ ನ್ಯಾಯಾಲಯಕ್ಕೆ ಪೀಠ ನಿರ್ದೇಶನ ನೀಡಿತು.
ಅರ್ಜಿದಾರರ ಪರ ವಕೀಲರು ಮಾಡಿದ ತಪ್ಪುಗಳಿಗೆ ಆರೋಪಿ ಕಾನೂನಿನ ಅವಕಾಶ ನಿರಾಕರಿಸಬಾರದು. ಈ ಆದೇಶದ ಪ್ರತಿಯನ್ನು ಎಲ್ಲಾ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪೀಠ ನಿರ್ದೇಶನ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.