ಬೆಂಗಳೂರು: ಕೋವಿಡ್ ಕಾರಣದಿಂದ ರಾಜ್ಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಪ್ರಗತಿಯಲ್ಲಿ ಕುಂಠಿತವಾಗಿಲ್ಲ. ಹಲವು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದರಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಮಣಿಮೇಖಲೈ ಹೇಳಿದರು.
ಸೋಮವಾರ ನಡೆದ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂಕಷ್ಟ ಇದ್ದರೂ ಕೃಷಿ ಸಾಲ ಮತ್ತು ಮುದ್ರಾ ಸಾಲ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕದ ಬ್ಯಾಂಕ್ಗಳು ದೇಶದಲ್ಲೇ ಅಗ್ರ ಸ್ಥಾನದಲ್ಲಿವೆ. ಈ ಎರಡೂ ಯೋಜನೆಗಳಡಿ ₹ 13,497 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ಭದ್ರತೆ ಯೋಜನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪ್ರಧಾನ ಮಂತ್ರಿ ಆವಾಸ್ ಮತ್ತು ಪಿಎಂಎಸ್ ನಿಧಿ ಯೋಜನೆಗಳ ಅನುಷ್ಠಾನದಲ್ಲೂ ರಾಜ್ಯ ಮುಂಚೂಣಿಯಲ್ಲಿದೆ’ ಎಂದು ತಿಳಿಸಿದರು.
ಬ್ಯಾಂಕಿಂಗ್ಗೆ ಸಂಬಂಧಿಸಿದ ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಲ್ಲ ಬ್ಯಾಂಕ್ಗಳೂ ಅವುಗಳನ್ನು ಪಾಲಿಸಿದರೆ ಒಳ್ಳೆಯದಾಗುತ್ತದೆ. ಕೃಷಿ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ಪಡೆಯಲು ಸಾಧ್ಯವಾಗುವ ‘ಫ್ರೂಟ್ಸ್’ ಯೋಜನೆಯನ್ನು ಕೆನರಾ ಬ್ಯಾಂಕ್ ನೆಲಮಂಗಲ ಮತ್ತು ತಾವರೆಕೆರೆ ಶಾಖೆಗಳಲ್ಲಿ ಅನುಷ್ಠಾನಕ್ಕೆ ತಂದಿದೆ. ಇತರ ಬ್ಯಾಂಕ್ಗಳು ಶೀಘ್ರದಲ್ಲಿ ಈ ಯೋಜನೆ ಅಳವಡಿಸಿಕೊಂಡರೆ ಕೃಷಿಕರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.
ಸೆಪ್ಟೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿನ ಬ್ಯಾಂಕ್ಗಳಲ್ಲಿ ಠೇವಣಿಯಲ್ಲಿ ಶೇಕಡ 12.9 ಮತ್ತು ಸಾಲ ವಿತರಣೆಯಲ್ಲಿ ಶೇ 8.7ರಷ್ಟು ಪ್ರಗತಿಯಾಗಿದೆ. ವಾರ್ಷಿಕ ಸಾಲ ಯೋಜನೆಗೆ ಹೋಲಿಸಿದರೆ ಕೃಷಿ ವಲಯದಲ್ಲಿ ಶೇ 50 ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯದಲ್ಲಿ ಶೇ 49.68ರಷ್ಟು ಪ್ರಗತಿಯಾಗಿದೆ ಎಂದು ವಿವರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.