ADVERTISEMENT

ಈಗಲ್‌ಟನ್‌ ಒತ್ತುವರಿ ಮಾಡಿದ್ದ 77 ಎಕರೆ ಜಾಗ ಜಿಲ್ಲಾಡಳಿತದ ವಶಕ್ಕೆ

77 ಎಕರೆ 18 ಗುಂಟೆ ಸುತ್ತಲೂ ಬೇಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 20:29 IST
Last Updated 14 ಸೆಪ್ಟೆಂಬರ್ 2021, 20:29 IST
ಒತ್ತುವರಿ ಮಾಡಿಕೊಂಡಿದ್ದ ಜಾಗಕ್ಕೆ ಬೇಲಿ ಹಾಕುವಲ್ಲಿ ನಿರತರಾಗಿದ್ದ ಕಾರ್ಮಿಕರು
ಒತ್ತುವರಿ ಮಾಡಿಕೊಂಡಿದ್ದ ಜಾಗಕ್ಕೆ ಬೇಲಿ ಹಾಕುವಲ್ಲಿ ನಿರತರಾಗಿದ್ದ ಕಾರ್ಮಿಕರು   

ರಾಮನಗರ: ಬಿಡದಿ ಬಳಿ ಈಗಲ್‌ಟನ್‌ ರೆಸಾರ್ಟ್‌ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಜಿಲ್ಲಾಡಳಿತ ಮಂಗಳವಾರ ವಶಕ್ಕೆ ಪಡೆದಿದ್ದು, ಬೇಲಿ ನಿರ್ಮಿಸಲಾಗುತ್ತಿದೆ.

ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೈ.ಲಿಮಿಟೆಡ್‌ ಎಂಬ ಸಂಸ್ಥೆಯು ಗೋಮಾಳಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್‌ ಸಮೀಪ ಗಾಲ್ಫ್ ಅಂಕಣ ಹಾಗೂ ರಸ್ತೆ ನಿರ್ಮಿಸಿಕೊಂಡಿತ್ತು. ಈ ಒತ್ತುವರಿ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಈಗಿನ ಮಾರುಕಟ್ಟೆ ಮೌಲ್ಯದಲ್ಲಿ ದಂಡ ವಸೂಲಿ ಮಾಡುವಂತೆ 2014ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಅದರಂತೆ ರಾಜ್ಯ ವಿಧಾನಮಂಡಲ ಉಪ ಸಮಿತಿಯು ಪರಿಶೀಲನೆ ನಡೆಸಿ ಜಮೀನಿನ ಮಾರುಕಟ್ಟೆ ಮೌಲ್ಯ ನಿಗದಿ ಮಾಡಿದ್ದು, 77 ಎಕರೆಗೆ ₹920 ಕೋಟಿ ದಂಡ ವಾಪತಿಸುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಇದಕ್ಕೆ ಒಪ್ಪದ ಒತ್ತುವರಿದಾರರು 77 ಎಕರೆಗೆ ₹12.35 ಕೋಟಿ ಮಾತ್ರವೇ ಪಾವತಿಸುವುದಾಗಿ ತಿಳಿಸಿದ್ದರು. ಇದಕ್ಕೆ ಸರ್ಕಾರ ಒಪ್ಪದಿದ್ದಾಗ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕಳೆದ ತಿಂಗಳಷ್ಟೇ ಹೈಕೋರ್ಟ್‌ ಅರ್ಜಿದಾರರ ಮನವಿಯನ್ನು ವಜಾ ಮಾಡಿತ್ತು.

ADVERTISEMENT

‘ಸಂಬಂಧಿಸಿದ ಜಮೀನಿಗೆ ಸರ್ಕಾರ ನಿಗದಿಪಡಿಸಿದ ದಂಡ ಪಾವತಿಸುವಂತೆ 2017ರಲ್ಲೇ ನೋಟಿಸ್ ನೀಡಿದ್ದೆವು. ಆದರೆ ಈವರೆಗೂ ದಂಡ ಕಟ್ಟದ ಹಿನ್ನೆಲೆಯಲ್ಲಿ ಜಮೀನನ್ನು ವಶಕ್ಕೆ ಪಡೆದಿದ್ದು, ಸುತ್ತಲೂ ಬೇಲಿ ನಿರ್ಮಿಸಲಾಗುವುದು’ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.