ADVERTISEMENT

ಕೇಂದ್ರ ಘೋಷಿಸಿದ ನಾಲ್ಕನೇ ಪ್ಯಾಕೇಜ್‌ ರಾಜ್ಯಕ್ಕೆ ಹೆಚ್ಚಿನ ಲಾಭ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 16 ಮೇ 2020, 12:44 IST
Last Updated 16 ಮೇ 2020, 12:44 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ‘ಆತ್ಮನಿರ್ಭರ್ ಭಾರತ ನಿರ್ಮಾಣದ ಹಾದಿಯಲ್ಲಿ ಶನಿವಾರ ಘೋಷಿಸಿದ ಹಲವು ಯೋಜನೆಗಳು ಮತ್ತು ಆರ್ಥಿಕ ನೆರವಿನಿಂದ ರಾಜ್ಯಕ್ಕೆ ಹೆಚ್ಚು ಲಾಭ ಆಗಲಿದೆ. ಉದ್ಯೋಗ ಅವಕಾಶ ವೃದ್ಧಿಯಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಾಲ್ಕನೇ ಪ್ಯಾಕೇಜ್‌ ಘೋಷಿಸಿದ ಬಳಿಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಖನಿಜ ವಲಯದಲ್ಲಿ ತರುತ್ತಿರುವ ಅಮೂಲಾಗ್ರ ಬದಲಾವಣೆ ರಾಜ್ಯದ ಖನಿಜ ನೀತಿಗೆ ಪೂರಕವಾಗಲಿದೆ. ನಮ್ಮ ರಾಜ್ಯದಲ್ಲಿ ಹಲವು ಖನಿಜಗಳ ನಿಕ್ಷೇಪಗಳಿವೆ. ಈಗ ಅವುಗಳ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಿದೆ. ಈಗಿರುವ ಖನಿಜ ಸಂಬಂಧಪಟ್ಟ ಕಾಯ್ದೆಯಡಿ ನಮಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಗಣಿಗಾರಿಕೆ ಮಾಡುವ ನಿಟ್ಟಿನಲ್ಲಿ ಕೆಲವು ಅಡಚಣೆಗಳಿದ್ದವು. ಈಗ, ನಾವು ಮುಕ್ತ ವಾತಾವರಣದಲ್ಲಿ ಕೆಲಸ ಮಾಡಬಹುದು’ ಎಂದಿದ್ದಾರೆ.

‘ರಾಜ್ಯದಲ್ಲಿ ಯಥೇಚ್ಚ ಖನಿಜ ಸಂಪತ್ತು ಇದ್ದು (ಕಬ್ಬಿಣ, ತಾಮ್ರ, ಬಂಗಾರ, ಕ್ವಾರ್ಜ್ ಮತ್ತು ಯುರೇನಿಯಂ) ಅವುಗಳನ್ನು ನಾವು ಗಣಿಗಾರಿಕೆ ಮಾಡಿದರೆ, ರಾಜ್ಯದ ಆರ್ಥಿಕ ಬೆಳವಣಿಗೆಗೆ ಕಾರಣ ಆಗಬಹುದು. ಖಾಸಗಿ ಸಹಬಾಗಿತ್ವದ ಗಣಿಗಾರಿಕೆ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದೆ’ ಎಂದೂ ಹೇಳಿದ್ದಾರೆ

ADVERTISEMENT

‘ದೇಶದ ರಕ್ಷಣಾ ವಲಯ, ಬಾಹ್ಯಾಕಾಶ, ನಾಗರಿಕ ವಿಮಾನಯಾನ, ಅಂತರಿಕ್ಷ ಯಾನ, ಮತ್ತು ಅಂತರಿಕ್ಷ ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿ ರಾಜ್ಯಕ್ಕೆ ಲಾಭವಾಗಲಿದೆ. ಈ ವಲಯದಲ್ಲಿ ಸಾಕಷ್ಟು ಉತ್ಪಾದನಾ ಘಟಕಗಳು ನಮ್ಮ ರಾಜ್ಯದಲ್ಲಿದ್ದು, ಅವುಗಳಿಗೆ ಪೂರಕವಾಗಿ ಇತರೆ ಸಂಬಂಧಪಟ್ಟ ಘಟಕಗಳು ಸ್ಥಾಪನೆ ಆಗುತ್ತವೆ. ಎಲ್ಲಕ್ಕೂ ಹೆಚ್ಚಾಗಿ, ಶನಿವಾರ ಪ್ರಕಟಿಸಿದ ಆರ್ಥಿಕ ಯೋಜನೆಗಳು ದೇಶದ ವಿದೇಶ ವಿನಿಮಯವನ್ನು ಉಳಿತಾಯ ಮಾಡಲಿದೆ’ ಎಂದೂ ಯಡಿಯೂರಪ್ಪ ‍ಪ್ರತಿಕ್ರಿಯಿಸಿದ್ದಾರೆ.

‘ಅಣು ವಿಜ್ಞಾನದಲ್ಲಿ ಖಾಸಗಿ ಸಹಭಾಗಿತ್ವ ಕೂಡ ನಮ್ಮ ರಾಜ್ಯಕ್ಕೆ ಹೆಚ್ಚಿನ ಲಾಭ ತರಲಿದೆ. ದಾವೋಸ್ ಪ್ರವಾಸದಲ್ಲಿ ಹಲವಾರು ಬಾಹ್ಯಾಕಾಶ ಮತ್ತು ರಕ್ಷಣಾ ವಲಯ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ತಮ್ಮ ಇಚ್ಚೆ ವ್ಯಕ್ತಪಡಿಸಿದ್ದು, ಈಗ ಈ ಕಂಪನಿಗಳ ಯೋಜನೆಗಳು ಸಾಕಾರಗೊಳ್ಳಲಿವೆ‘ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.