ADVERTISEMENT

ವೈಟ್‌ ಟಾಪಿಂಗ್‌ ಎಷ್ಟು ಸೂಕ್ತ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 0:10 IST
Last Updated 17 ಜನವರಿ 2025, 0:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವೈಟ್‌ ಟಾಪಿಂಗ್ ರಸ್ತೆಗಳು ವೈಜ್ಞಾನಿಕವಾಗಿ ಇರುತ್ತವೆಯೊ, ಇಲ್ಲವೋ ಎಂಬ ಬಗ್ಗೆ ಸೂಕ್ತ ವಿವರಣೆ ನೀಡಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು ಮಹಾನಗರದ ರಸ್ತೆಗಳ ದುಃಸ್ಥಿತಿ ಕುರಿತಂತೆ ಕೋರಮಂಗಲದ ವಿಜಯ್ ಮೆನನ್ ಸೇರಿ ಒಟ್ಟು ನಾಲ್ವರು, 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಗುಂಡಿಗಳನ್ನು ಮುಚ್ಚುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದನ್ನು ಗಮನಿಸಿದ ನ್ಯಾಯಪೀಠ, ‘ರಸ್ತೆ ಗುಂಡಿ ಮುಚ್ಚುವ ದುರಸ್ತಿ ಕಾರ್ಯವನ್ನು ಆಗ್ಗಾಗ್ಗೆ ಕೈಗೊಳ್ಳುತ್ತಾ ಇರುತ್ತೀರೋ ಅಥವಾ ಮುಂಗಾರು ಮಳೆ ಬಂದಾಗ ಮಾತ್ರವೇ ನಡೆಸುತ್ತೀರೋ, ಇಲ್ಲವೇ ಪಿಐಎಲ್ ದಾಖಲಾದಾಗ ಅಷ್ಟೇ ಮಾಡುತ್ತೀರೋ’ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು.

ADVERTISEMENT

ಅಂತೆಯೇ, ‘ವೈಟ್‌ ಟಾಪಿಂಗ್ ರಸ್ತೆಗಳು ಸೂಕ್ತವಲ್ಲ ಎಂಬ ಹಲವು ವರದಿಗಳಿವೆ. ಸಾಮಾನ್ಯವಾಗಿ ಡಾಂಬರು ರಸ್ತೆ ಮೇಲೆ ಮಳೆ ನೀರು ಬಿದ್ದರೆ ಅದು ಮಣ್ಣಿನಲ್ಲಿ ಇಂಗಿ ಹೋಗುತ್ತದೆ. ಆದರೆ, ವೈಟ್‌ ಟಾಪಿಂಗ್‌ ರಸ್ತೆಯಲ್ಲಿ ಹಾಗಾಗುವುದಿಲ್ಲ. ಆದ್ದರಿಂದ, ವೈಟ್‌ ಟಾಪಿಂಗ್ ರಸ್ತೆ ವೈಜ್ಞಾನಿಕವಾಗಿ ಸರಿಯೇ, ತಪ್ಪೇ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿ’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಫೆಬ್ರುವರಿ 20ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.