ADVERTISEMENT

ಕಾವೇರಿ ಹೋರಾಟದ ಮುಂದಾಳತ್ವವನ್ನು ಹೊಸ ತಲೆಮಾರಿನವರು ವಹಿಸಿಕೊಳ್ಳಬೇಕು: ದೇವೇಗೌಡ

ಹೊಸ ತಲೆಮಾರಿನ ರಾಜಕಾರಣಿಗಳಿಗೆ ಸಲಹೆ ನೀಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 8:02 IST
Last Updated 27 ಫೆಬ್ರುವರಿ 2021, 8:02 IST
ಎಚ್‌.ಡಿ ದೇವೇಗೌಡ (ಪಿಟಿಐ ಚಿತ್ರ)
ಎಚ್‌.ಡಿ ದೇವೇಗೌಡ (ಪಿಟಿಐ ಚಿತ್ರ)   

ಪಾಂಡವಪುರ: ‘ನನಗೀಗ 88 ವರ್ಷ. ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಎಚ್‌.ಡಿ.ಚೌಡಯ್ಯ ಅವರಿಗೂ ವಯ ಸ್ಸಾಗಿದೆ. ಹಾಗಾಗಿ ಜಿಲ್ಲೆಯ ಹೊಸ ತಲೆಮಾರಿನ ರಾಜಕಾರಣಿಗಳು ಕಾವೇರಿ ನೀರಿನ ಹೋರಾಟದ ಮುಂಚೂಣಿಯಲ್ಲಿರಬೇಕಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಜೆಡಿಎಸ್‌ ಪಕ್ಷದಿಂದ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾವೇರಿ ನೀರಿನ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ. ತಮಿಳುನಾಡು ಸರ್ಕಾರದ ನದಿ ಜೋಡಣೆ ಯೋಜನೆಯಿಂದಾಗಿ ನಮ್ಮ ನೀರಾವರಿ ಯೋಜನೆಗಳಿಗೆ ಅಡ್ಡಿಯಾಗಲಿದೆ. ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕೈಗೊಂಡಿದ್ದ ಮೇಕೆದಾಟು ಡ್ಯಾಂ ನಿರ್ಮಾಣ ಯೋಜನೆಗೆ ಸಮಸ್ಯೆ ಉಂಟಾ ಗಲಿದೆ’ ಎಂದು ತಿಳಿಸಿದರು.

ADVERTISEMENT

‘ಕಾವೇರಿ ನೀರಿನ ಸಮಸ್ಯೆ ಎದುರಾ ದಾಗ ಹೋರಾಟ ಮಾಡುತ್ತಲೇ ಬಂದಿ ದ್ದೇನೆ. ಸಂಸತ್‌ನಲ್ಲಿ ರಾಜ್ಯದ ಪರ ಚರ್ಚೆ ನಡೆಸಿ ನ್ಯಾಯ ಒದಗಿಸಿಕೊಟ್ಟಿದ್ದೇನೆ. ಈಗ ಮತ್ತಷ್ಟು ಹೋರಾಟ ಅನಿವಾ ರ್ಯವಾಗಿದೆ. ನನಗೆ ಶಕ್ತಿ ನೀಡಿದರೆ ಹೋರಾಟ ನಡೆಸಲು ಸಿದ್ಧ’ ಎಂದರು.

ಕಾವೇರಿ ನೀರು ಕೇವಲ ಮಂಡ್ಯ ಜನರಿಗಷ್ಟೇ ಅಲ್ಲ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಕಾವೇರಿ ನೀರಿನ ಅಗತ್ಯವಿದೆ. ಹಾಗಾಗಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದರು.

ಎಚ್‌ಡಿಕೆ ಸಿ.ಎಂ– ರಾಜ್ಯದ ಕೂಗು: ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ನನ್ನಲ್ಲಿಲ್ಲ. ಮಗನ ಮೇಲಿನ ವ್ಯಾಮೋಹದಿಂದ ಹೇಳಲಾಗುತ್ತಿದೆ ಎಂದು ಅಂದು ಕೊಳ್ಳುವುದಲ್ಲ. ಆದರೆ, ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನತೆಯ ಕೂಗು. ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಮುಂದಿನ ವಿಧಾನ ಸಭೆ ಚುನಾವಣೆಯ ದಿಕ್ಕಾಗಲಿದೆ. ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಹೇಳುವವರೂ ಇದ್ದಾರೆ. ಅಂಥವರ ಹೆಸರು ಹೇಳಿ ಅಗೌರವ ತರುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮಲ್ಲೆ ಇದ್ದು, ನಮ್ಮ ಬಳಿಯೇ ಅಧಿಕಾರ ಪಡೆದು, ನಮ್ಮ ಶಕ್ತಿಯನ್ನು ಕುಗ್ಗಿಸಲು ಸಂಚು ರೂಪಿಸುವವರು ಹಲವರು ಇದ್ದಾರೆ. ಎಲ್ಲ ಜಾತಿ, ವರ್ಗದವರನ್ನು ಒಗ್ಗೂಡಿಸಿ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ರೈತ ಹಿತರಕ್ಷಣಾ ಸಮಿತಿಯಿಂದ ಮನವಿ: ತಮಿಳುನಾಡು ಸರ್ಕಾರ ಕೈಗೊಂಡಿರುವ ನದಿ ಜೋಡಣೆಯಿಂದಾಗಿ ರಾಜ್ಯಕ್ಕೆ ತೊಂದರೆಯಾಗಲಿದ್ದು, ರಾಜ್ಯದ ಹಿತಕಾಯಬೇಕು. ಮಂಡ್ಯ ಮೈಷುಗರ್ ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡುತ್ತಿರುವ ಸರ್ಕಾರದ ನಿರ್ಧಾರವನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕೆ.ಬೋರಯ್ಯ, ಸುನಂದಾ ಜಯರಾಮ್ ಅವರು ಎಚ್.ಡಿ.ದೇವೇಗೌಡರಿಗೆ ಮನವಿ ಸಲ್ಲಿಸಿದರು.

ಎರಡು ರೀತಿಯ ರೈತ ಸಂಘ: ರೈತ ಸಂಘದಲ್ಲಿ ಎರಡು ರೀತಿ ಇವೆ. ಒಂದು ನನ್ನ ಹೋರಾಟವನ್ನು ಬೆಂಬಲಿಸುತ್ತಾರೆ. ಆದರೆ ಮತ್ತೊಂದು ರೈತ ಸಂಘ ನನ್ನನ್ನು ವಿರೋಧಿಸುತ್ತದೆ. ಇದರಿಂದ ನನಗೇನು ಬೇಸರ ಇಲ್ಲ ಎಂದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ತುಮಕೂರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಪರ ನಿಲ್ಲಲಿಲ್ಲವೇ? ಅವರ ಎಲ್ಲ ಆಟ ನಮಗೆ ಗೊತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದರು.

ಶಾಸಕ ಸಾ.ರಾ.ಮಹೇಶ್ ಮಾತನಾಡಿದರು.

ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷೆ ರುಕ್ಮಿಣಿ ಮಾದೇಗೌಡ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನ ಪರಿಷರ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮುಖಂಡರಾದ ಜಫ್ರುಲ್ಲಾ ಖಾನ್, ಎಲ್.ಆರ್.ಶಿವರಾಮೇಗೌಡ, ಜಿ.ಬಿ.ಶಿವಕುಮಾರ್, ಡಿ.ರಮೇಶ್, ಕೆ.ಆರ್.ಪೇಟೆ ದೇವರಾಜು, ಜಿ.ಪಂ.ಸದಸ್ಯರಾದ ಸಿ.ಅಶೋಕ, ಅನಸೂಯ, ಶಾಂತಲ, ತಾ.ಪಂ.ಅಧ್ಯಕ್ಷ ನವೀನ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.