ಮುಳಬಾಗಿಲು: ತಾಲ್ಲೂಕಿನ ಕುರುಡುಮಲೆ ಗ್ರಾಮ ವಿನಾಯಕನ ದೇವಾಲಯಕ್ಕೆ ಪ್ರಸಿದ್ಧಿಯಾಗಿದೆ. ಪ್ರಸಿದ್ಧ ಕೌಂಡಿನ್ಯ ನದಿ ಹರಿದರೂ ಗ್ರಾಮದಲ್ಲಿ ಯಾವಾಗಲೂ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ.
ದೇವಾಲಯದ ಬಳಿ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಯಾತ್ರಿಭವನದಲ್ಲಿ ನೀರು ಇಲ್ಲದೆ ಅದರ ಮೂಲ ಉದ್ದೇಶವೇ ಸಫಲವಾಗಿಲ್ಲ. ಕೆಲವೇ ಕೊಳವೆಬಾವಿಗಳು ಹಾಗೂ ಟ್ಯಾಂಕರ್ ಮೂಲಕ ಕೊಡುವ ನೀರೆ ಇಲ್ಲಿನ ಸಾವಿರಕ್ಕೂ ಹೆಚ್ಚಿನ ಮನೆಯವರಿಗೆ ಆಶ್ರಯ. ಇಂತಹ ಸನ್ನಿವೇಶದಲ್ಲಿ ಗ್ರಾಮದ ಶ್ಯಾನುಬೋಗ್ ನರಸಿಂಗರಾವ್ ಎಂಬುವವರ ನೂರು ವರ್ಷಕ್ಕೂ ಹಿಂದಿನ ಬಾವಿಯಲ್ಲಿ ಸದಾ ಕಾಲ ನೀರು ಇರುತ್ತದೆ.
ಗ್ರಾಮದವರೆಲ್ಲರೂ ಅಗತ್ಯವಾದಾಗ ಈ ಬಾವಿಯ ನೀರು ಸೇದಿಕೊಂಡು ಹೋಗುತ್ತಾರೆ. ಎಷ್ಟು ಜನ ಬಂದು ನೀರು ಪಡೆದುಕೊಂಡು ಹೋದರು ಈ ಬಾವಿಯ ನೀರಿನ ಹರಿವು ಕಡಿಮೆಯಾಗಿಲ್ಲ ಎನ್ನುತ್ತಾರೆ ನರಸಿಂಗರಾವ್ ಮೊಮ್ಮಗ ಕೆ.ವಿ.ವಿಜಯಕುಮಾರ್.
ಈ ಗ್ರಾಮದಲ್ಲಿ ಎಲ್ಲಾ ಧರ್ಮ, ಜಾತಿಯ ಜನರಿದ್ದು ಯಾರೇ ನೀರು ಕೇಳಿದರೂ ತಮ್ಮ ಮನೆಯಲ್ಲಿ ಅಡ್ಡಿಪಡಿಸುವುದಿಲ್ಲ. ನೀರನ್ನು ಎತ್ತಲು ಮೋಟಾರ್ ಉಪಯೋಗಿಸುವುದಿಲ್ಲ. ಕೇವಲ ಹಗ್ಗದ ಮೂಲಕ ಬಿಂದಿಗೆಯಲ್ಲಿ ನೀರು ಸೇದಿ ಪಡೆಯಲು ಅವಕಾಶ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.