ADVERTISEMENT

ಬೆಟ್ಟ–ಗುಡ್ಡಗಳೇರಿ ನಿಂತ ಕೃಷಿ ಬೆಳೆ!

ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯ ಫಲ

ಚಂದ್ರಹಾಸ ಹಿರೇಮಳಲಿ
Published 25 ಆಗಸ್ಟ್ 2020, 20:03 IST
Last Updated 25 ಆಗಸ್ಟ್ 2020, 20:03 IST
ಶಿವಮೊಗ್ಗ–ಸವಳಂಗ ರಸ್ತೆಯ ಗುಡ್ಡಗಳ ಮೇಲೆ ಬೆಳೆದು ನಿಂತಿರುವ ಕೃಷಿ ಬೆಳೆಗಳು
ಶಿವಮೊಗ್ಗ–ಸವಳಂಗ ರಸ್ತೆಯ ಗುಡ್ಡಗಳ ಮೇಲೆ ಬೆಳೆದು ನಿಂತಿರುವ ಕೃಷಿ ಬೆಳೆಗಳು   

ಶಿವಮೊಗ್ಗ: ಬಗರ್‌ಹುಕುಂ ಸಾಗುವಳಿ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರವಿಸ್ತರಿಸಿದಂತೆಲ್ಲ ಹೊಸ ಸಾಗುವಳಿಯಲ್ಲೂ ಭಾರಿ ಪ್ರಮಾಣದ ಹೆಚ್ಚಳ ಕಂಡುಬರುತ್ತಿದೆ.

ಬೆಟ್ಟ, ಗುಡ್ಡಗಳನ್ನೂ ಬಿಡದೆ ರೈತರು ಸಾಗುವಳಿ ಮಾಡಿದ್ದು, ಬಯಲು ಸೀಮೆಯ ಕುರುಚಲುಪ್ರದೇಶಗಳಲ್ಲೂಜೋಳ, ರಾಗಿ, ಮೆಕ್ಕೆಜೋಳದ ಬೆಳೆಗಳು ಕಂಗೊಳಿಸುತ್ತಿವೆ.

1990–1992ರಲ್ಲಿ ಮೊದಲ ಬಾರಿ ಬಗರ್‌ಹುಕುಂಸಾಗುವಳಿದಾರರಿಗೆ ಭೂಹಕ್ಕು ನೀಡಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ನಮೂನೆ 50ರ ಅಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಂದು ಸಾಕಷ್ಟು ರೈತರು ಭೂಮಿಯ ಹಕ್ಕು ಪಡೆದುಕೊಂಡಿದ್ದರು.

ADVERTISEMENT

1997–1998ರಲ್ಲಿನಮೂನೆ 53ರ ಅಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಜಿಲ್ಲೆಯ 1,45,601 ರೈತರು ಅರ್ಜಿ ಸಲ್ಲಿಸಿದ್ದರು.ಆದರೆ, ದಶಕ ಕಳೆದರೂ ಅರ್ಜಿಗಳು ಇತ್ಯರ್ಥವಾಗಿರಲಿಲ್ಲ.2015ರ ನಂತರ ತಾಲ್ಲೂಕುಗಳಲ್ಲಿ ಬಗರ್‌ಹುಕುಂ ಸಮಿತಿಗಳನ್ನು ಪುನರ್‌ ರಚಿಸಲಾಗಿತ್ತು.ಅವುಗಳಲ್ಲಿ 18,383 ಅರ್ಜಿಗಳನ್ನು ಇತ್ಯರ್ಥ ಮಾಡಿ,38,077.12 ಎಕರೆಗೆ ಸಂಬಂಧಿಸಿ ಸಾಗುವಳಿ ಹಕ್ಕು ನೀಡಲಾಗಿತ್ತು.1.25 ಲಕ್ಷ ಅರ್ಜಿಗಳನ್ನುತಿರಸ್ಕರಿಸಲಾಗಿತ್ತು.

ನಿಯಮಕ್ಕೆ ಪೂರಕವಾಗಿ ಇದ್ದರೂ ಅರ್ಹ ರೈತರಅರ್ಜಿಗಳನ್ನು ತಿರಿಸ್ಕರಿಸಲಾಗಿದೆ. ಶ್ರೀಮಂತರಿಗೆ, ಪಟ್ಟಭದ್ರರಿಗೆ ಭೂಮಿಯ ಹಕ್ಕು ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಪರಿಶೀಲನೆಗಾಗಿ 2018ರ ಮಾರ್ಚ್‌ನಲ್ಲಿ ನಾಲ್ಕು ಸಮಿತಿಗಳನ್ನು ರಚಿಸಲಾಗಿತ್ತು. ಎಲ್ಲ ತಾಲ್ಲೂಕು ಕಚೇರಿಗಳಿಗೂ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ಸಮಿತಿಗಳು ವ್ಯಾಪಕ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿದ್ದವು. ಹಾಗಾಗಿ, ಅಂದು ಕಂದಾಯ ಸಚಿವರಾಗಿದ್ದಜಿಲ್ಲೆಯವರೇ ಆದ ಕಾಗೋಡು ತಿಮ್ಮಪ್ಪ ಅವರು ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದರು.ನಮೂನೆ 57ರ ಅಡಿಯಲ್ಲಿ 2019ರ ಮಾರ್ಚ್‌ 16ರವರೆಗೂ ಜಿಲ್ಲೆಯ 78,461 ಸಾಗುವಳಿದಾರರು ಹೊಸದಾಗಿಅರ್ಜಿ ಸಲ್ಲಿಸಿದ್ದಾರೆ.ಅರ್ಜಿ ಸಲ್ಲಿಸುವ ಅವಧಿಯನ್ನು ಮತ್ತೆ ಎರಡು ವರ್ಷ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

‘ಅವಧಿ ವಿಸ್ತರಿಸಿದಂತೆ ಕಂದಾಯ ಭೂಮಿಯ ಜತೆಗೆ, ರೈತರು ಕಿರು ಅರಣ್ಯ, ಬೆಟ್ಟಗುಡ್ಡಗಳನ್ನೂ ಬಿಡದೆ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ, ಕಂದಾಯ ಇಲಾಖೆಗಳಿಂದ ಜಂಟಿ ಸರ್ವೆಯಾಗದ ಪರಿಣಾಮ ನಿರ್ದಿಷ್ಟ ಭೂಮಿಯ ವ್ಯಾಪ್ತಿ ಗುರುತಿಸುವುದು ಕಷ್ಟವಾಗುತ್ತಿದೆ. ಹಾಗಾಗಿಯೇ, ಕಿರು ಅರಣ್ಯದಲ್ಲಿ ಮಂಜೂರಾತಿ ನೀಡಿದ್ದಾರೆ ಎಂಬ ಆರೋಪದಡಿ ಭದ್ರಾವತಿ ತಹಶೀಲ್ದಾರ್ ವಿರುದ್ಧ ಅರಣ್ಯಾಧಿಕಾರಿಯೊಬ್ಬರು ಈಚೆಗೆ ಎಫ್‌ಐಆರ್ ದಾಖಲಿಸಿದ್ದರು. ಈಗ ಸಲ್ಲಿಕೆಯಾಗಿರುವ, ಸಲ್ಲಿಕೆಯಾಗುವಭಾರಿ ಸಂಖ್ಯೆಯ ಅರ್ಜಿಗಳ ಇತ್ಯರ್ಥ ಮಾಡಲು ಅಂತಹ ಹಲವು ಸಂಕಷ್ಟ ಎದುರಿಸಬೇಕಿದೆ’ ಎನ್ನುತ್ತಾರೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.