ಸೆನ್ಸೇರಾ
ಬೆಂಗಳೂರು: ವಾಹನಗಳು ಮತ್ತು ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ₹2,100 ಕೋಟಿ ಹೂಡಿಕೆ ಮಾಡಲಿದ್ದು, ಈ ಸಂಬಂಧ ಕೈಗಾರಿಕಾ ಇಲಾಖೆ ಜತೆಗೆ ಒಡಂಬಡಿಕೆಗೆ ಸಹಿ ಮಾಡಿದೆ.
ಖನಿಜ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಇಲಾಖೆಯ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಅವರು ಒಪ್ಪಂದಕ್ಕೆ ಅಂಕಿತ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ ಸುಮಾರು 3,500 ಉದ್ಯೋಗಗಳು ಸೃಷ್ಟಿ ಆಗಲಿವೆ’ ಎಂದು ಹೇಳಿದರು.
ಈ ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ತರಬೇತಿ ಕೇಂದ್ರವನ್ನೂ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ನಮ್ಮ ರಾಜ್ಯದಲ್ಲೇ ಇವೆ’ ಎಂದು ಹೇಳಿದರು.
ಎಲಿವೇಟರ್ಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ ₹135 ಕೋಟಿ ಹೂಡಲು ಆಸಕ್ತಿ ವ್ಯಕ್ತಪಡಿಸಿದ ಕಾರಣ ಸಚಿವ ಎಂ.ಬಿ.ಪಾಟೀಲ, ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದ ಜತೆ ಮಾತುಕತೆ ನಡೆಸಿದರು.
ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದೆ. ಭೂಮಿ ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್.ಸಿಂಘ್ವಿ, ಕಾರ್ಯದರ್ಶಿ ರಾಜೇಶ್ ಮೋದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.