ADVERTISEMENT

ಖಾತೆ ಬಗ್ಗೆ ಬೇಡಿಕೆ ಇಟ್ಟಿಲ್ಲ, ಯಾವ ಖಾತೆ ಕೊಟ್ಟರೂ ನಿಭಾಯಿಸುವೆ: ಬಿ.ಸಿ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 7:26 IST
Last Updated 8 ಫೆಬ್ರುವರಿ 2020, 7:26 IST
ಬಿ. ಸಿ. ಪಾಟೀಲ್
ಬಿ. ಸಿ. ಪಾಟೀಲ್   

ತುಮಕೂರು: ನಾನು ಯಾವುದೇ ಖಾತೆಯ ಬಗ್ಗೆ ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಶನಿವಾರ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನದ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅಧಿಕಾರ ನೀಡಲು ಸತಾಯಿಸಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೊರಗಿನಿಂದ ಬಂದವರು, ಒಳಗಿನವರನ್ನು ಸಂಭಾಳಿಸಿಕೊಂಡು ಹೋಗಬೇಕಾದ ಸಂದರ್ಭ ಎದುರಾಗಿತ್ತು. ಹಾಗಾಗಿ ಅಧಿಕಾರ ಹಂಚಿಕೆ ವಿಳಂಬವಾಯಿತು. ಇಂದು ಖಾತೆ ಹಂಚಿಕೆಯಾಗುವ ಸಾಧ್ಯತೆಯಿದ್ದು, ತಮಗೆ ಯಾವುದೇ ಜವಬ್ದಾರಿ ನೀಡಿದರೂ ಸ್ವೀಕರಿಸುತ್ತೇನೆ ಎಂದರು.

ನಾಲ್ಕಾರು ಜಿಲ್ಲೆಗೆ ಸೀಮಿತವಾಗಿದ್ದ ದುರಾಡಳಿತ, ಕೆಟ್ಟ ಸರ್ಕಾರವನ್ನು ತೆಗೆಯಬೇಕು ಎಂಬ ಕಾರಣಕ್ಕಾಗಿ ನಾವೆಲ್ಲರೂ ಹೊರಬಂದೆವು. ನಮ್ಮೊಂದಿಗೆ ಹೊರಬಂದು ಚುನಾವಣೆಯಲ್ಲಿ ಸೋತವರೊಂದಿಗೆ ಈಗಾಗಲೇ ಮುಖ್ಯಮಂತ್ರಿ ಮಾತನಾಡಿದ್ದಾರೆ. ಸೋತವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿದ್ದಾರೆ. ಇದೀಗ ರಾಜ್ಯದಲ್ಲಿ ಸುಭದ್ರ ಸರ್ಕಾರವಿದ್ದು, ಯಡಿಯೂರಪ್ಪನವರೊಂದಿಗೆ ಕೈ ಜೋಡಿಸುತ್ತೇವೆ ಎಂದು ಹೇಳಿದರು.

ADVERTISEMENT

ನಿಮ್ಮ ಲಕ್ಕಿ ನಂಬರ್ 9 ಇರುವ ವಾಹನವನ್ನೇ ಸರ್ಕಾರಿ ವಾಹನವನ್ನಾಗಿ ಪಡೆದಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಮನಸ್ಸು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ನಾನು ಪಡೆದಿರುವ ಸರ್ಕಾರಿ ವಾಹನ 1 ಲಕ್ಷಕ್ಕೂ ಹೆಚ್ಚು ಕಿ.ಮೀ ಓಡಿದೆ. ಆದರೆ ನೋಡಲಿಕ್ಕೆ ಚೆನ್ನಾಗಿದೆ ಎಂಬ ಕಾರಣಕ್ಕಾಗಿ ಪಡೆದುಕೊಂಡಿದ್ದೇನೆ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.