ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ ಯಿಂದ ನಿಯೋಜನೆ ಮೇರೆಗೆ ಬೇರೆ ಇಲಾಖೆಗೆ ಹೋಗಿರುವ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಂಜೀವ ಮಠಂದೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇನ್ನು ಮುಂದೆ ಯಾವುದೇ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ಕಳುಹಿಸುವುದಿಲ್ಲ. ಈಗಾಗಲೇ ನಿಯೋಜನೆ ಮೇರೆಗೆ ಹೋಗಿರುವವರನ್ನು ವಾಪಸ್ ಕರೆಸಿಕೊಳ್ಳುವುದು ಕಷ್ಟ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಜೆಡಿಎಸ್ನ ವೆಂಕಟರಾವ್ ನಾಡಗೌಡ, ‘ಪಶು ಸಂಗೋಪನೆ ಇಲಾಖೆಯಿಂದ ನಿಯೋಜನೆ ಮೇರೆಗೆ ಹೋಗಿದ್ದವರನ್ನು ನಾನು ಸಚಿವನಾಗಿದ್ದ ವೇಳೆಗೆ ವಾಪಸ್ ಕರೆಸಿಕೊಂಡಿದ್ದೆ. ನೀವು ಸಹ ಆದೇಶ ಹೊರಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದರು.
ಈಶ್ವರಪ್ಪ, ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಆಪ್ತ ಸಹಾಯಕರಾಗಿ ಹಾಕಿಸಿಕೊಡಿ ಎಂದು ಹಲವು ಶಾಸಕರು ನನ್ನ ಮೇಲೆ ನಿರಂತರ ಒತ್ತಡ ಹೇರುತ್ತಿರುತ್ತಾರೆ. ಅನಿವಾರ್ಯವಾಗಿ ನಿಯೋಜನೆ ಮೇರೆಗೆ ಕಳುಹಿಸಬೇಕಾಗುತ್ತದೆ. ಇಲ್ಲಿ ಗದ್ದಲ ಎಬ್ಬಿಸುವವರೇ ಮತ್ತೆ ಪತ್ರ ಹಿಡಿದುಕೊಂಡು ಬರುತ್ತಾರೆ. ಇಡೀ ಸದನ ಒಪ್ಪಿದರೆ ಈ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ನಾನು ಸಿದ್ಧ’ ಎಂದು ಹೇಳಿದರು. ಇಲಾಖೆಗೆ ವಾಪಸ್ ಕರೆಸಿಕೊಳ್ಳಿ ಎಂದು ಹಲವು ಸದಸ್ಯರು ಒತ್ತಾಯಿಸಿದರು.
‘ಈ ಬಗ್ಗೆ ಆದೇಶ ಹೊರಡಿಸುತ್ತೇನೆ’ ಎಂದು ಈಶ್ವರಪ್ಪ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.