ADVERTISEMENT

ಬೆಂಗಳೂರು, ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ: ಆರೋಪಿ ಗುರುತು ‍ಪತ್ತೆ

ಹುಕ್ಕೇರಿ ಪಟ್ಟಣದ ನಿವಾಸಿ ಕಿರಣ ಮೋಷಿ ಹುಚ್ಚಾಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 14:43 IST
Last Updated 10 ಅಕ್ಟೋಬರ್ 2023, 14:43 IST
<div class="paragraphs"><p>ಕಿರಣ ಮೋಷಿ</p></div>

ಕಿರಣ ಮೋಷಿ

   

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹ ಹಾಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಗಳಿಗೆ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಆರೋಪಿಯ ಗುರುತು‍ ಪತ್ತೆ ಮಾಡಲಾಗಿದೆ.

ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ಕಿರಣ ಮೋಷಿ (48) ಗುರುತಿಸಲಾದ ಆರೋಪಿ. ಸದ್ಯ ಈತ ಬೆಂಗಳೂರಿನಲ್ಲಿದ್ದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡುತ್ತಿದ್ದಾನೆ. ಬಂಧನಕ್ಕೆ ತಂಡ ರಚಿಸಲಾಗಿದ್ದು, ಬೆಂಗಳೂರಿಗೆ ತೆರಳಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌. ಸಿದ್ರಾಮಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಅಕ್ಟೋಬರ್‌ 8ರಂದು ಕರೆ ಮಾಡಿದ ಆರೋಪಿ, ಬಂದಿಖಾನೆಗಳಲ್ಲಿ ಬಾಂಬ್‌ ಸ್ಫೋಟಿಸುವುದು, ಗಲಭೆ ಎಬ್ಬಿಸುವುದು ಹಾಗೂ ಜೀವಹಾನಿ ಮಾಡುವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಶೇಷ ಅವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಆರೋಪಿಯು ತನ್ನ ಪತ್ನಿ ಹೆಸರಿನಲ್ಲಿರುವ ಸೀಮ್‌ ಬಳಸಿ ಕರೆ ಮಾಡಿದ್ದಾನೆ. ಮೂರು ಬೇರೆಬೇರೆ ಮೊಬೈಲ್‌ ಸಂಖ್ಯೆಗಳಿಂದ ಕರೆ ಬಂದಿದ್ದು, ಮೂರನ್ನೂ ಜಾಲಾಡಲಾಗಿದೆ. ಒಂದು ಸಂಖ್ಯೆ ಆತನ ಪತ್ನಿ ಹೆಸರಿನಲ್ಲಿರುವುದು ಗೊತ್ತಾಗಿದೆ. ಆರೋಪಿಯ ಜಾಡು ಹಿಡಿಯಲಾಗಿದ್ದು, ಶೀಘ್ರ ಬಂಧಿಸಲಾಗುವುದು’ ಎಂದು ಸಿದ್ರಾಮಪ್ಪ ತಿಳಿಸಿದರು.

‘ಕಳೆದ ವರ್ಷ ಕೂಡ ಈ ಆರೋಪಿ ಬೇರೊಬ್ಬರ ಸಾಮಾಜಿಕ ಜಾಲತಾಣದ ಅಕೌಂಟ್‌ ಹ್ಯಾಕ್‌ ಮಾಡಿ, ಅಶ್ಲೀಲ ವಿಡಿಯೊ ಪೋಸ್ಟ್‌ ಮಾಡಿದ್ದ. ಸೈಬರ್‌ ಅಪರಾಧದಡಿ ಬಂಧನಕ್ಕೆ ಒಳಗಾಗಿ 10 ದಿನ ಹಿಂಡಲಗಾ ಜೈಲಿನಲ್ಲಿದ್ದ. ಏಕಾಏಕಿ ಜನಪ್ರಿಯ ಆಗಬೇಕೆಂಬ ಆಸೆಯಿಂದ ಈ ರೀತಿ ಹುಚ್ಚಾಟಗಳನ್ನು ಮೇಲಿಂದ ಮೇಲೆ ಮಾಡಿದ್ದು ಗೊತ್ತಾಗಿದೆ’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.