ADVERTISEMENT

‘ಬಡವರ’ ರೈಲು ಓಡಾಟ ಬಂದ್‌

ಮೂರು ರೈಲುಗಳ ಸಂಚಾರ ಸ್ಥಗಿತಕ್ಕೆ ಇಲಾಖೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 19:51 IST
Last Updated 10 ಜೂನ್ 2020, 19:51 IST
   

ಬೆಂಗಳೂರು: ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುವಹುಬ್ಬಳ್ಳಿ–ಬೆಂಗಳೂರು ಪ್ಯಾಸೆಂಜರ್ ರೈಲು ಸೇರಿ ಮೂರು ರೈಲುಗಳ ಸಂಚಾರ ಸ್ಥಗಿತಗೊಳಿಸಲು ನೈರುತ್ಯ ರೈಲ್ವೆ ಮುಂದಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ರೈಲು ಬೆಂಗಳೂರಿನಿಂದ ಬೆಳಿಗ್ಗೆ 6.15 ಹೊರಟು, ಸಂಜೆ 6.40ಕ್ಕೆ ಹುಬ್ಬಳ್ಳಿ ತಲುಪುತ್ತಿತ್ತು. ಬೆಳಿಗ್ಗೆ 9.15ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9.15ಕ್ಕೆ ಬೆಂಗಳೂರು ತಲುಪುತ್ತಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ₹85 ದರದಲ್ಲಿ ಪ್ರಯಾಣ ಮಾಡಬಹುದಾಗಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿ ತನಕ ಹಲವು ತಾಲ್ಲೂಕು ಕೇಂದ್ರಗಳು ಮತ್ತು ಊರುಗಳಲ್ಲಿ ನಿಲುಗಡೆಗೆ ಅವಕಾಶ ಇತ್ತು. ಇಲ್ಲಿನ ಜನ ಕಡಿಮೆ ಖರ್ಚಿನಲ್ಲಿ ಸಮೀಪ–ದೂರದ ಊರಿಗೆ ಪ್ರಯಾಣಿಸಲು ಇದು ಅನುಕೂಲಕಾರಿಯಾಗಿತ್ತು.

ಇದರೊಂದಿಗೆ ಹುಬ್ಬಳ್ಳಿ– ಮೀರಜ್ ಎಕ್ಸ್‌ಪ್ರೆಸ್, ಬೆಳಗಾವಿ–ವಾಸ್ಕೋ ವಿಶೇಷ ಪ್ಯಾಸೆಂಜರ್ ರೈಲು ಸಂಚಾರವನ್ನು ರದ್ದುಗೊಳಿಸಲು ರೈಲ್ವೆ ಮಂಡಳಿಗೆ ನೈರುತ್ಯ ರೈಲ್ವೆ ಪ್ರಸ್ತಾವನೆ ಸಲ್ಲಿಸಿದೆ.

ADVERTISEMENT

‘ಹುಬ್ಬಳ್ಳಿ–ಮೀರಜ್ ಎಕ್ಸ್‌ಪ್ರೆಸ್‌ ರೈಲು 1995ರಿಂದ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ವಾಸ್ಕೋ–ಬೆಳಗಾವಿ ನಡುವಿನ ರೈಲಿನಿಂದ ಅಷ್ಟೇನೂ ಪ್ರಯೋಜನ ಇಲ್ಲ. ಆದರೆ, ಉಳಿದೆರಡು ರೈಲುಗಳ ಸಂಚಾರ ಸ್ಥಗಿತಗೊಳಿಸಬಾರದು’ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಒತ್ತಾಯಿಸಿದರು.

‘ಈ ರೈಲುಗಳ ಬದಲಿಗೆ ಬೇರೆ ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರಿಗೆ ತೊಂದರೆ ಆಗುವುದಿಲ್ಲ. ಇದು ಇಲಾಖೆಯ ಆಂತರಿಕ ವಿಷಯ’ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದರು.

ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕೆತಿಪಟೂರಿನಲ್ಲಿ 12 ರೈಲು, ಪಾಂಡವಪುರದಲ್ಲಿ 16 ರೈಲು, ಬಂಟ್ವಾಳದಲ್ಲಿ 5 ರೈಲುಗಳು ಸೇರಿ ವಿವಿಧ ನಿಲ್ದಾಣಗಳಲ್ಲಿ ಒಟ್ಟು 40 ರೈಲುಗಳ ನಿಲುಗಡೆಯನ್ನೂ ರದ್ದುಪಡಿಸಲು ಇಲಾಖೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.