ADVERTISEMENT

ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

ಉಷ್ಣಾಂಶ ಅಲ್ಪ ಇಳಿಕೆ: ಕಾಫಿ, ಅಡಿಕೆ ಫಸಲಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:45 IST
Last Updated 9 ಏಪ್ರಿಲ್ 2021, 19:45 IST
ಕಳಸ ಪಟ್ಟಣ, ಆಸುಪಾಸು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿದಿದೆ.
ಕಳಸ ಪಟ್ಟಣ, ಆಸುಪಾಸು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿದಿದೆ.   

ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ಮಳೆಯಾಗಿದ್ದು, ಬಿಸಿಲಿನಿಂದ ತತ್ತರಿಸಿದ ಜನತೆಗೆ ತಂಪೆರೆದಿದೆ.

ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಗದಗ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಸಾಯಂಕಾಲ ಗುಡುಗು ಸಹಿತ ಮಳೆಯಾಗಿದೆ.

ಬೆಳಗಾವಿ ನಗರ ಮತ್ತು ರಾಮದುರ್ಗ, ಅಥಣಿ, ಗೋಕಾಕದಲ್ಲಿ ಕೆಲ ಕಾಲ ಜೋರು ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಯಿತು. ವಿಜಯಪುರ ಜಿಲ್ಲೆಯ ಹೊರ್ತಿ, ತಿಕೋಟಾ, ಕಲಕೇರಿ, ಸಿಂದಗಿಯಲ್ಲಿಯೂ ಗುಡುಗು, ಸಿಡಿಲಿನ ಮಳೆ ಬಿದ್ದಿದೆ.

ADVERTISEMENT

ಹುಬ್ಬಳ್ಳಿ, ಧಾರವಾಡ ನಗರದಲ್ಲಿ ಕೆಲ ಸಮಯ ಧಾರಾಕಾರ ಮಳೆಯಾಗಿದೆ. ಹಾವೇರಿಯ ಹಾನಗಲ್‌ ಹಾಗೂ ಗದಗದಲ್ಲಿಯೂ ಮಳೆಯಾಗಿದೆ.

ಕಳಸ ಪಟ್ಟಣ ಮತ್ತು ಆಸುಪಾಸಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು. ಎರಡು ದಿನಗಳಿಂದ ಮೋಡ ಕವಿದರೂ, ಮಳೆಯಾಗದೇ ರೈತರು ನಿರಾಶರಾಗಿದ್ದರು.

ಸಂಜೆ 4 ಗಂಟೆಗೆ ಭಾರಿ ಗಾಳಿ ಜೊತೆಗೆ ಸುಮಾರು ಅರ್ಧಗಂಟೆ ಉತ್ತಮ ಮಳೆಯಾಯಿತು. ತೇವಾಂಶದ ಕೊರತೆಯಿಂದ ಬಳಲುತ್ತಿದ್ದ ಅಡಿಕೆ, ಕಾಫಿ ಫಸಲಿಗೆ ಈ ಮಳೆ ಅನುಕೂಲವಾಗಿದೆ. ಗರಿಷ್ಠ ಪ್ರಮಾಣಕ್ಕೆ ಏರಿದ್ದ ಹಗಲಿನ ಉಷ್ಣಾಂಶ ಕೂಡ ಈ ಮಳೆಯಿಂದ ಕುಸಿದಿದೆ.

ಕಲಬುರ್ಗಿ ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ತುಂತುರು ಮಳೆ ಸುರಿಯಿತು.

ಒಂದು ವಾರದಿಂದ ನಗರದ ಗರಿಷ್ಠ ಉಷ್ಣಾಂಶ 40ರಿಂದ 42 ಡಿಗ್ರಿ ದಾಟಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ಶುಕ್ರವಾರ ಸುರಿದ ಮಳೆ ತುಸು ತಂಪೆರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.