ADVERTISEMENT

ಮೂರು ಮರಿಗಳಿಗೆ ಜನ್ಮ ನೀಡಿದ ಹುಲಿ ‘ರಾಣಿ’

ಪಿಲಿಕುಲ ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 13:11 IST
Last Updated 5 ಜೂನ್ 2021, 13:11 IST
ಮೂರು ಮರಿಗಳಿಗೆ ಜನ್ಮನೀಡಿದ 10 ವರ್ಷದ ಹುಲಿ ‘ರಾಣಿ’ 
ಮೂರು ಮರಿಗಳಿಗೆ ಜನ್ಮನೀಡಿದ 10 ವರ್ಷದ ಹುಲಿ ‘ರಾಣಿ’    

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದ ಮೃಗಾಲಯದಲ್ಲಿರುವ 10 ವರ್ಷದ ಹುಲಿ ‘ರಾಣಿ’ ಮೂರು ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಆರೋಗ್ಯವಾಗಿದ್ದು, 16 ದಿನಗಳಲ್ಲಿ ಕಣ್ಣು ತೆರೆಯಲಿವೆ.

‘ರಾಣಿ’ 2019 ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿದ್ದು, ಈಗ ಬೆಳೆದು ದೊಡ್ಡದಾಗಿವೆ. 5 ಹುಲಿಗಳಿಗೆ ಪ್ರತ್ಯೇಕವಾದ ವಾಸದ ಮನೆಯನ್ನು ಅಬುಧಾಬಿಯ ರಾಮದಾಸ ಕಾಮತ್ ದಂಪತಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುತ್ತಾರೆ.

ರಾಣಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಯಮದಡಿ ಬನೇರುಘಟ್ಟ ಮೃಗಾಲಯದಿಂದ ತರಲಾಗಿತ್ತು. ಇದರ ಬದಲಾಗಿದೆ ಪಿಲಿಕುಲದ ಗಂಡು ಹುಲಿಯನ್ನು ಬನ್ನೇರುಘಟ್ಟ ಮೃಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13 ಕ್ಕೆ ಏರಿದೆ.

ADVERTISEMENT

ಕಾಡುಶ್ವಾನ ‘ದೋಳ್’ ಮರಿಗಳ ಜನನ: ಆಂಧ್ರಪ್ರದೇಶದ ವಿಶಾಖಪಟ್ಟಣ ಮೃಗಾಲಯದಿಂದ ತರಿಸಲಾದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್’ ಇತ್ತೀಚಿಗೆ ಏಳು ಮರಿಗಳಿಗೆ ಜನ್ಮ ನೀಡಿದೆ.

ಇದೆ ‘ದೋಳ್’ ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು. ಇನೊಂದು ‘ದೋಳ್’ ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಳದಲ್ಲಿ ‘ದೋಳ್’ ಕಾಡು ಶ್ವಾನಗಳ ಸಂಖ್ಯೆ 33 ಕ್ಕೆ ಏರಿದೆ.

‘ರಿಯಾ’ ಪಕ್ಷಿಯ ಜನನ: ಉಷ್ಟ್ರಪಕ್ಷೀಯ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನಿಟ್ಟಿದ್ದು, ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದೆ. ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಮರಿಯು ಜನ್ಮ ತಾಳಿದೆ. ಎರಡು ಬಿಳಿ ಮತ್ತು ಎರಡು ಕಂದು ‘ರಿಯಾ’ ಗಳನ್ನು ಪ್ರಾಣಿ ವಿನಿಮಯದಡಿ ಕೇರಳದ ತಿರುವನಂತಪುರಂ ಮೃಗಾಲಯದಿಂದ ತರಲಾಗಿತ್ತು.

‘ರೆಟಿಕ್ಯುಲೇಟೆಡ್’ ಹೆಬ್ಬಾವು: ಅಪರೂಪದ ಅಳಿವಿನಂಚಿನಲಿರುವ ‘ರೆಟಿಕ್ಯುಲೇಟೆಡ್’ ಹೆಬ್ಬಾವು ಸುಮಾರು 20 ಮೊಟ್ಟೆಗಳನ್ನಿಟ್ಟು ಕಾವು ನೀಡುತ್ತಿದೆ. ಇದೇ ಹೆಬ್ಬಾವು ಕಳೆದ ವರ್ಷ 17 ಮರಿಗಳಿಗೆ ಜನ್ಮ ನೀಡಿದೆ. ರೆಟಿಕ್ಯುಲೇಟೆಡ್ ಹೆಬ್ಬಾವು ನಿಕೋಬಾರ್‌ನಲ್ಲಿ ಕಾಣಸಿಗುತ್ತವೆ.

ಕಾಳಿಂಗ ಸರ್ಪ: ಕೆಲವು ವರ್ಷಗಳ ಹಿಂದೆ ದೇಶದಲ್ಲೇ ಪ್ರಥಮಬಾರಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದ್ಧಿ ಪಡಿಸಿದ ಕೀರ್ತಿ ಪಿಲಿಕುಳ ಮೃಗಾಲಯಕ್ಕೆ ಸಲ್ಲುತ್ತದೆ. ಈಗ ಕಾಳಿಂಗ ‘ನಾಗಮಣಿ’ ಯು ಆರು ಮೊಟ್ಟೆಗಳನ್ನಿಟ್ಟು. ಅವುಗಳಿಗೆ ಕೃತಕ ಕಾವು ಕೊಡಲಾಗುತ್ತಿದೆ. ಪಿಲಿಕುಳದಲ್ಲಿ ಈಗ 19 ಕಾಳಿಂಗ ಸರ್ಪಗಳಿವೆ.

ಲಾಕ್‌ಡೌನ್ ಬಳಿಕ ಚೆನ್ನೈನ ವಂಡಲೂರು ಮೃಗಾಲಯದಿಂದ ಬಿಳಿ ಹುಲಿ ತರಿಸಲಾಗುವುದು. ಒಡಿಶಾದ ನಂದನಕಾನನ್, ಸೂರತ್, ಹೈದರಾಬಾದ್ ಮೃಗಾಲಯದಿಂದ ಕೆಲವು ಪ್ರಾಣಿ ಪಕ್ಷಿಗಳನ್ನು ತರುವ ಕಾರ್ಯಕ್ರಮ ಇದೆ.
ಎಚ್.ಜೆ. ಭಂಡಾರಿ, ಪಿಲಿಕುಲ ಜೈವಿಕ ಉದ್ಯಾನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.