ADVERTISEMENT

ಭದ್ರತೆ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆ ಸ್ಥಳ ಬದಲಾವಣೆ- ಡಾ.ಜಿ.ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 6:46 IST
Last Updated 5 ನವೆಂಬರ್ 2018, 6:46 IST
   

ಬೆಂಗಳೂರು:ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ ಒಳಗೆ ನಡೆಸಲುತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಭದ್ರತೆ ಸಂಬಂಧ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

‘ಟಿಪ್ಪು‌ಜಯಂತಿ‌ ವೇಳೆ ಆಚರಣೆಯ ಪರ ಅಥವಾ ವಿರೋಧ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ನೀಡುವಂತಿಲ್ಲ.ಎಲ್ಲ ಜಿಲ್ಲೆಗಳಲ್ಲೂ ಸಭಾಂಗಣದಲ್ಲಿ‌ ಮಾತ್ರ ಆಚರಣೆಗೆ ಅವಕಾಶ ನೀಡಬೇಕು. ಜಯಂತಿ ಆಚರಣೆಯ ಸ್ಥಳ ಹೊರತುಪಡಿಸಿ ಬೇರೆಡೆ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿಅವಹೇಳನಕಾರಿ, ಪ್ರಚೋದನಾಕಾರಿ ಪೋಸ್ಟ್‌ ಹಾಕುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

ಭದ್ರತೆ ದೃಷ್ಟಿಯಿಂದರವೀಂದ್ರ ಕಲಾಕ್ಷೇತ್ರದಲ್ಲಿ‌ ಆಚರಣೆಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಬ್ಯಾಂಕ್ಟೆಟ್ ಹಾಲ್‌ನಲ್ಲಿ ಆಚರಣೆ ಮಾಡಿದ್ದರೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಹೀಗಾಗಿ ಸ್ಥಳ ಬದಲಾವಣೆ ಮಾಡಿದ್ದೇವೆ. ಸರಕಾರದ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳೂ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಮಾಡುವುದರಿಂದ ಟಿಪ್ಪು ಜಯಂತಿ ಕೂಡ ಇಲ್ಲಿಯೇ ಅಚರಣೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಎಲ್ಲ ಜಿಲ್ಲೆಗಳಲ್ಲೂ ಜಯಂತಿ ಆಚರಣೆಗೆ ಎಸ್‌ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ.‌ ಇದಕ್ಕೆ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ನಮ್ಮ ಕೆಎಸ್‌ಆರ್‌ಪಿ‌ ಬೆಟಾಲಿಯನ್‌‌ ಕಳುಹಿಸಿದ್ದೇವೆ. ಹೀಗಾಗಿ ರ‍್ಯಾಪಿಡ್‌ಆ್ಯಕ್ಷನ್ ಫೋರ್ಸ್‌ನ್ನು ಟಿಪ್ಪು ಜಯಂತಿಗೆ ನಿಯೋಜನೆ ಮಾಡಲಾಗಿದೆ ಎಂದರು.

ಆಚರಣೆ ಸಂದರ್ಭದಲ್ಲಿ ಗಲಭೆ, ಶಾಂತಿ ಭಂಗ ಮಾಡಲು ಪ್ರಯತ್ನ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಂತಿಭಂಗ ಮಾಡುವ ಹೇಳಿಕೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ಸರ್ಕಾರಕಳೆದ ಮೂರು ವರ್ಷದಿಂದ ಆಚರಣೆ ಮಾಡುತ್ತಿದ್ದೇವೆ. ಕೆಲವರು ಈ ಜಯಂತಿಗೆ ಭಂಗ ತರುವ ಹೇಳಿಕೆ ನೀಡುತ್ತಿರುವುದರಿಂದ ಇಷ್ಟೆಲ್ಲ ಭದ್ರತೆ‌ ನಿಯೋಜಿಸಲಾಗಿದೆ ಎಂದರು.

ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ವಿರೋಧಿ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಆಗ ವೈಯಕ್ತಿಕವಾಗಿ ಈ ಹೇಳಿಕೆ ನೀಡಿದ್ದರು. ಇದು ಮೈತ್ರಿ ಸರಕಾರ. ಅಲ್ಲದೆ, ಹಿಂದಿನ ಸರ್ಕಾರದಲ್ಲಿ ತೆಗೆದುಕೊಂಡು ಎಲ್ಲ ಕಾರ್ಯ ಮುಂದುವರೆಸುವ ವಾಗ್ದಾನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಹೇಮಾವತಿಯಿಂದ ಸಿದ್ದಗಂಗಾ ಮಠಕ್ಕೆ ನೀರು

ಸಿದ್ದಗಂಗಾ ಮಠದಲ್ಲಿ 10 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಅಲ್ಲಿಯ ಮಕ್ಕಳಿಗೆ ಕುಡಿಯುವ ನೀರಿನ ಸಂಬಂಧ ವಿಶೇಷ ಯೋಜನೆಯಡಿ ಬೋರ್‌ವೆಲ್ ಕೊರೆಸಿ ನೀರು ನೀಡಲಾಗುತ್ತಿತ್ತು. ಈಗ ಬೋರ್‌ವೆಲ್ ಒಣಗಿರುವ ಬಗ್ಗೆ ನನಗೂ‌ ಮಾಹಿತಿ ಬಂದಿದೆ. ಹೀಗಾಗಿ ಆ ಮಕ್ಕಳಿಗೆ ಹೇಮಾವತಿಯಿಂದ ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.