ADVERTISEMENT

ಕೊಡಗಿನಲ್ಲಿ ಬಾಗಿಲು ಮುಚ್ಚಿರುವ ಅಂಗಡಿಗಳು; ಖಾಸಗಿ ಬಸ್‌, ಆಟೊ ಸಂಚಾರ ಇಲ್ಲ

ಕೆಎಸ್ಆರ್‌ಟಿಸಿ ಬಸ್ ಎಂದಿನಂತೆ ಸಂಚಾರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 3:02 IST
Last Updated 10 ನವೆಂಬರ್ 2018, 3:02 IST
ಮಡಿಕೇರಿಯಲ್ಲಿ ಬಂದ್‌ ವಾತಾವರಣ
ಮಡಿಕೇರಿಯಲ್ಲಿ ಬಂದ್‌ ವಾತಾವರಣ    

ಮಡಿಕೇರಿ: ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್‌ಗೆ ಕರೆ ನೀಡಿದ್ದು ಜಿಲ್ಲೆಯ ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿವೆ.

ಹೋಟೆಲ್‌ಗಳೂ ಬಾಗಿಲು ಮುಚ್ಚಿದ್ದು ಬಂದ್‌ ಮಾಹಿತಿ ಇಲ್ಲದೇ ಮಡಿಕೇರಿಗೆ ಬಂದಿರುವ ಪ್ರವಾಸಿಗರು ಬೆಳಿಗ್ಗಿ‌ ತಿಂಡಿಗೆ ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಖಾಸಗಿ ಹಾಗೂ ಆಟೊಗಳು ರಸ್ತೆಗೆ ಇಳಿದಿಲ್ಲ. ಕೆಎಸ್‌ಆರ್‌ಟಿಸಿ‌ ಹಾಗೂ ಸಾರ್ವಜನಿಕರ ವಾಹನಗಳು ಎಂದಿನಂತೆಯೇ ಸಂಚರಿಸುತ್ತಿವೆ. ಅಹಿತಕರ ಘಟನೆ ನಡೆಯದಂತೆ ತಡೆಯಲು‌ ಆಯಕಟ್ಟಿನ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ADVERTISEMENT

ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣ, ಕಾರ್ಯಕ್ರಮ ನಡೆಯುವ ಕೋಟೆ ಸಭಾಂಗಣದ ಸುತ್ತ ಪೊಲೀಸ್ ಸರ್ಪಗಾವಲು ಇದೆ.

ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಅವರು ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದು ಭದ್ರತೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

2015ರಲ್ಲಿ ನಡೆದ ಘರ್ಷಣೆ ವೇಳೆ ಮೃತಪಟ್ಟಿದ್ದ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ನಗರದ ಓಂಕಾರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳ ಕಾರ್ಯಕರ್ತರು ಸೇರಿದ್ದಾರೆ. ಬಳಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.