
ತಿರುಪತಿ-ಶಿರಡಿ ವಿಶೇಷ ಎಕ್ಸ್ಪ್ರೆಸ್ ರೈಲಿಗೆ ಚಾಲನೆ
ಬೆಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳಗಳಾದ ಆಂಧ್ರಪ್ರದೇಶದ ತಿರುಪತಿ ಹಾಗೂ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶಿರಡಿ ಸಾಯಿ ನಗರದ ನಡುವೆ ಸಂಚರಿಸುವ ವಾರದ ವಿಶೇಷ ಎಕ್ಸ್ಪ್ರೆಸ್ ರೈಲಿಗೆ ಇಂದು ಚಾಲನೆ ಸಿಕ್ಕಿದೆ.
ನವದೆಹಲಿಯ ರೈಲ್ ಭವನದಲ್ಲಿ ಇಂದು ವರ್ಚುವಲ್ ಆಗಿ ನಡೆದ ಸಮಾರಂಭದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ರೈಲಿಗೆ ಹಸಿರು ನಿಶಾನೆ ತೋರಿದರು.
ತಿರುಪತಿ - ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಾಯಿತು. ಈ ರೈಲು ಸೇವೆಯು ಎರಡೂ ಯಾತ್ರಾ ಸ್ಥಳಗಳ ನಡುವಿನ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತದೆ. ಹಾಗೆಯೇ, ಯಾತ್ರಿಕರ ಸುಗಮ, ಸುರಕ್ಷಿತ ಮತ್ತು ವೇಗದ ಪ್ರಯಾಣಕ್ಕೆ ಸಹಾಯಕವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಒಂದು ರೈಲು (17425) ಪ್ರತಿ ಭಾನುವಾರ ಬೆಳಿಗ್ಗೆ 4 ಗಂಟೆಗೆ ತಿರುಪತಿ ಬಿಟ್ಟು, ಮಾರನೇ ದಿನ ಸೋಮವಾರ ಬೆಳಿಗ್ಗೆ 10.45ಕ್ಕೆ ಶಿರಡಿ ತಲುಪಲಿದೆ. ಆಂಧ್ರದ ಕರಾವಳಿಯ ನೆಲ್ಲೂರು, ಗುಂಟೂರು ಹಾಗೂ ತೆಲಂಗಾಣದ ಹೈದರಾಬಾದ್, ಕರ್ನಾಟಕದ ಬೀದರ್ ಮೂಲಕ 31 ನಿಲ್ದಾಣಗಳ ಮೂಲಕ ರೈಲು 31 ಗಂಟೆಗಳಲ್ಲಿ ಶಿರಡಿ ತಲುಪಲಿದೆ.
ಇನ್ನೊಂದು ರೈಲು (17428) ಪ್ರತಿ ಸೋಮವಾರ ಸಂಜೆ 8 ಗಂಟೆಗೆ ಶಿರಡಿಯಿಂದ ಹೊರಟು ಹೈದರಾಬಾದ್, ನೆಲ್ಲೂರು ಮಾರ್ಗವಾಗಿ ಬುಧವಾರ ಬೆಳಿಗ್ಗೆ 1.30ಕ್ಕೆ ತಿರುಪತಿ ತಲುಪಲಿದೆ.
ಈ ರೈಲು ಒಟ್ಟು 1,435 ಕಿ.ಮೀ. ಕ್ರಮಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಹೊಸ ರೈಲಿನಿಂದ ತಿರುಪತಿ ಹಾಗೂ ಶಿರಡಿಗೆ ಹೋಗುವ ಕರ್ನಾಟಕದ ಬೀದರ್, ಕಲಬುರಗಿ ಹಾಗೂ ಸುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.