ADVERTISEMENT

ಸುಳ್ಳು ಸುದ್ದಿ ಸೃಷ್ಟಿಸಿದವರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 13:26 IST
Last Updated 26 ಮಾರ್ಚ್ 2020, 13:26 IST
   

ಧಾರವಾಡ: ಕೋವಿಡ್-19 ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿಯನ್ನು ಪತ್ರಕರ್ತರೊಬ್ಬರ ಭಾವಚಿತ್ರ ಹಾಗೂ ಕಾಲ್ಪನಿಕ ಹೆಸರನೊಂದಿಗೆಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

ಇಲ್ಲಿನ ಹೊಸಯಲ್ಲಾಪುರ ವ್ಯಕ್ತಿಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟ ಸಂದರ್ಭದಲ್ಲಿ ಇಂಥದ್ದೊಂದು ಸುದ್ದಿ ಹರಿದಾಡಿತ್ತು. ಇದನ್ನು ಹರಿಯಬಿಟ್ಟವರು ಪ್ರಮೋದ ಮಹಾಬಲಶೆಟ್ಟಿ ಹಾಗೂ ಅಭಿಷೇಕ ಮಲ್ಹಾರಿ ಎಂಬುವವರೇ ಎಂದು ಪತ್ತೆ ಮಾಡಿದ ಸೈಬರ್ ಠಾಣೆ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ವಿದ್ಯಾಗಿರಿ ಹಾಗೂ ಶಹರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಾರ್ಚ್ 22ರಂದು ಸಾಮಾಜಿಕ ಜಾಲತಾಣದಲ್ಲಿ ಈ ಸುಳ್ಳು ಸುದ್ದಿ ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು.ಇದರ ಆಧಾರದ ಇನ್‌ಸ್ಪೆಕ್ಟರ್ ಪ್ರಭುಗೌಡ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡ ಸೈಬರ್ ವಿಭಾಗದ ಪೊಲೀಸರು, ಸುಳ್ಳು ಸುದ್ದಿ ಹರಡಿದ ಈ ಇಬ್ಬರನ್ನು ಬಂಧಿಸಿದ್ದಾರೆ.

ADVERTISEMENT

ಯುವಕರಿಂದ ಮುಚ್ಚಳಿಕೆ ಬರೆಯಿಸಿಕೊಂಡಿರುವ ಪೊಲೀಸರು, ₹1ಲಕ್ಷ ಮೌಲ್ಯದ ಬಾಂಡ್ ಪಡದು ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ. ಇಂಥ ಕೃತ್ಯಗಳನ್ನು ಮತ್ತೆ ನಡೆಸಿದರೆ ಮೊಕದ್ದಮೆ ದಾಖಲಿಸಿ ₹5ಲಕ್ಷ ದಂಡ ಮತ್ತು ಕಠಿಣ ಕ್ರಮ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಕಮಿಷನರೇಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೃಷ್ಣಕಾಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.