
ನಗರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪತ್ರಕರ್ತ ಬಿ.ಎಂ. ಹನೀಫ್ ಹಾಗೂ ಲೇಖಕ ಎಂ.ಜಿ. ಹೆಗಡೆ ಅವರು ಕುಶಲೋಪರಿಯಲ್ಲಿ ತೋಡಗಿದ್ದರು. ಶಿವಸುಂದರ್, ಕೆ.ಎಸ್. ವಿಮಲಾ, ಸುಧಾಕರ್ ಬನ್ನಂಜೆ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಹಾತ್ಮ ಗಾಂಧಿ ಹಾಗೂ ಜವಾಹರ್ಲಾಲ್ ನೆಹರೂ ಅವರ ವಿಚಾರಗಳ ಮೇಲೆ ಆರ್ಎಸ್ಎಸ್ ಮತ್ತು ಬಿಜೆಪಿ ಮುಖಂಡರು ವ್ಯವಸ್ಥಿತವಾಗಿ ದಾಳಿ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದರು.
ಕ್ರಿಯಾ ಮಾಧ್ಯಮ ಹಾಗೂ ಎಂ.ಜಿ. ಹೆಗಡೆ ಅವರ ಅಭಿಮಾನಿ ಬಳಗ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಜಿ. ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಪುಸ್ತಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ನಮ್ಮ ದೇಶದಲ್ಲಿ ಗಾಂಧೀಜಿ ಹಾಗೂ ನೆಹರೂ ಅವರ ವಿಚಾರಗಳು ಇರುವವರೆಗೂ ಗೋಡ್ಸೆ ವಿಚಾರಧಾರೆಗಳಿಗೆ ಗೌರವ ಸಿಗುವುದಿಲ್ಲ ಎನ್ನುವುದನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಅರ್ಥ ಮಾಡಿಕೊಂಡಿವೆ. ಗಾಂಧೀಜಿ ಅವರ ಹೆಸರು ಶಾಶ್ವತವಾಗಿ ಉಳಿಯಬಾರದು ಎಂಬ ಉದ್ದೇಶದಿಂದ ಮನುವಾದಿ ಹಾಗೂ ಗೋಡ್ಸೆವಾದಿಗಳು ನರೇಗಾ ಕಾಯ್ದೆಯನ್ನು ವಿಕಸಿತ ಭಾರತ ಜಿ ರಾಮ್ ಜಿ ಎಂಬುದಾಗಿ ತಿದ್ದುಪಡಿ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ದೇಶದಲ್ಲಿರುವ ಯುವ ಸಮುದಾಯ ಹಾಗೂ ವಿಚಾರವಂತರು ಎಂ.ಜಿ. ಹೆಗಡೆ ಅವರ ಪುಸ್ತಕದಲ್ಲಿರುವ ಮಾಹಿತಿ ಬಳಸಿಕೊಂಡು ಜನಜಾಗೃತಿ ಮೂಡಿಸಬೇಕು. ಸಾಮಾಜಿಕ ನ್ಯಾಯ, ಹಿಂದುತ್ವದ ವಿಚಾರದಲ್ಲಿ ಆಷಾಡಭೂತಿತನ ತೋರಿಸುತ್ತಿದ್ದಾರೆ. ಸತ್ಯ ಸಂಗತಿಗಳನ್ನು ಜನತೆಯ ಮುಂದೆ ತರುವ ಚಳವಳಿಯನ್ನು ರೂಪಿಸುವ ಅಗತ್ಯ ಇದೆ. ರಾಮನ ಬಗ್ಗೆ ಜಪ ಮಾಡುವವರು, ರಾಮನ ಸಿದ್ದಾಂತಗಳನ್ನು ಅನುಸರಿಸದೇ, ಸಮಾಜವನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಲೇಖಕ ಎಂ.ಜಿ. ಹೆಗಡೆ ಮಾತನಾಡಿ, ‘ಇಡೀ ದೇಶದ ಚುಕ್ಕಾಣಿ ಹಿಂದೂಗಳ ಕೈಯಲ್ಲಿದೆ. ಆದರೆ ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರು ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂಬ ಸುಳ್ಳನ್ನು ಸತ್ಯದಂತೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.