ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ರಾಜ್ಯದ 220 ಮೆಡಿಕಲ್‌ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 12:19 IST
Last Updated 28 ಮಾರ್ಚ್ 2020, 12:19 IST
   

ದಾವಣಗೆರೆ: ಮೆಡಿಕಲ್‌ ಓದಲೆಂದು ಉಕ್ರೇನ್‌ಗೆ ತೆರಳಿರುವ ಜಿಲ್ಲೆಯ ಇಬ್ಬರು ಸೇರಿ ರಾಜ್ಯದ ಸುಮಾರು 220 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ವಿಮಾನ ಹಾರಾಟ ರದ್ದು ಪಡಿಸಿರುವುದರಿಂದ ದೇಶಕ್ಕೆ ಮರಳಲದಂತಾಗಿದೆ.

ದಾವಣಗೆರೆಯ ವಿನಯ್‌ ಕಲ್ಲಿಹಾಳ್‌ ಮತ್ತು ಸಂಜಯ್‌, ರಾಣೆಬೆನ್ನೂರಿನ ಅಮಿತ್‌ ಮತ್ತು ಸುಮನ್‌, ಮೈಸೂರಿನ ಶ್ರೀಕಾಂತ್‌, ಬೆಂಗಳೂರಿನ ಭಾವನಾ ಸೇರಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇದ್ದಾರೆ.

‘ಉಕ್ರೇನ್‌ನಲ್ಲಿ ಕೂಡ 300 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆಯಂತೆ. ಅವರು ಏನೋ ಮನೆಯಲ್ಲಿ ಚೆನ್ನಾಗಿ ಇದ್ದೇವೆ ಎಂದು ದಿನಾ ವಿಡಿಯೊ ಕರೆ ಮಾಡಿ ತಿಳಿಸುತ್ತಿದ್ದಾರೆ. ನಮ್ಮ ಮಕ್ಕಳು ನಮ್ಮ ಜತೆಗೆ ಇಲ್ಲ ಎಂಬುದು ಚಿಂತೆ ಹುಟ್ಟಿಸಿದೆ’ ಎಂದು ವಿನಯ್‌ನ ಹೆತ್ತವರಾದ ಎಲ್‌ಐಸಿ ಕಾಲೊನಿಯ ಪ್ರೊ. ರುದ್ರೇಶ್‌ ಮತ್ತು ಸುಮಾ ‘ಪ್ರಜಾವಾಣಿ’ ಜತೆ ಸಂಕಟ ತೋಡಿಕೊಂಡರು.

ADVERTISEMENT

‘ಅಲ್ಲಿನ ಪ್ರಜೆಗಳಂತೆಯೇ ನೋಡಿಕೊಳ್ಳುವುದಾಗಿ ಉಕ್ರೇನ್‌ ಸರ್ಕಾರ ಹೇಳಿದೆ. ಅಲ್ಲಿಯೂ ಏಪ್ರಿಲ್‌ ಮೂರರವರೆಗೆ ಲಾಕ್‌ಡೌನ್‌ ಮಾಡಲಾಗಿತ್ತು. ಅದನ್ನು ಏಪ್ರಿಲ್‌ 24ರ ವರೆಗೆ ವಿಸ್ತರಿಸಿದೆ. ಸರ್ಕಾರ ಇಲ್ಲಿನ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.