ಬೆಂಗಳೂರು: ಬೇಕರಿ, ಹೋಟೆಲ್, ಕಿರಾಣಿ ಅಂಗಡಿ, ಟೀ–ಅಂಗಡಿಗಳನ್ನು ನಡೆಸುತ್ತಿರುವವರ ವಾರ್ಷಿಕ ವಹಿವಾಟು ಮೊತ್ತ ₹40 ಲಕ್ಷ ದಾಟಿದ್ದರೆ, ಶೀಘ್ರವೇ ಅಂತಹವರಿಗೆ ಜಿಎಸ್ಟಿ ನೋಟಿಸ್ ಬರಲಿದೆ.
ಯುಪಿಐ ಮೂಲಕ ವಹಿವಾಟು ನಡೆಸುವ ರಾಜ್ಯದ ಎಲ್ಲ ಸಣ್ಣಪುಟ್ಟ ವರ್ತಕರ ಮಾಹಿತಿ ಕಲೆಹಾಕಿರುವ ವಾಣಿಜ್ಯ ತೆರಿಗೆ ಇಲಾಖೆಯು, ವಹಿವಾಟಿನ ಮೇಲೆ ಜಿಎಸ್ಟಿ ವಿಧಿಸಲು ಕ್ರಮ ತೆಗೆದುಕೊಂಡಿದೆ.
ನಗರದ ಕೆಲವು ಬೇಕರಿ ಮತ್ತು ಟೀ ಅಂಗಡಿ ಮಾಲೀಕರಿಗೆ ಜಿಎಸ್ಟಿ ಸಲ್ಲಿಸುವಂತೆ ನೋಟಿಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ವಿಚಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಶುಕ್ರವಾರ ಸ್ಪಷ್ಟೀಕರಣ ನೀಡಿದೆ.
‘2017ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅನ್ವಯ, ಸರಕುಗಳ ಮಾರಾಟದ ಮೌಲ್ಯ ವಾರ್ಷಿಕ ₹40 ಲಕ್ಷ ದಾಟಿದರೆ ಮತ್ತು ಸೇವೆಗಳ ಪೂರೈಕೆಯ ಮೌಲ್ಯ ವಾರ್ಷಿಕ ₹20 ಲಕ್ಷ ದಾಟಿದರೆ ವರ್ತಕರು ಜಿಎಸ್ಟಿ ನೋಂದಣಿ ಮಾಡಿಸಬೇಕು. ಆದರೆ, ಬಹುತೇಕ ಸಣ್ಣ–ಪುಟ್ಟ ವ್ಯಾಪಾರಿಗಳು ಜಿಎಸ್ಟಿ ನೋಂದಣಿ ಮಾಡಿಸಿಲ್ಲ’ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
‘ಅಂತಹ ವ್ಯಾಪಾರಿಗಳನ್ನು ಪತ್ತೆ ಮಾಡಲು ಯುಪಿಐ ಪ್ಲಾಟ್ಫಾರಂಗಳಿಂದ ಮಾಹಿತಿ ಕಲೆಹಾಕಲಾಗಿದೆ. ಸದರಿ ಮಾಹಿತಿಯನ್ನು ಪರಿಶೀಲಿಸಲಾಗಿದೆ. ₹40 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಅಡಿಯಲ್ಲಿ ನೋಂದಣಿ ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ಮಾತ್ರ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.