ಬೆಂಗಳೂರು: ‘ನನ್ನಂತೆ ಲಕ್ಷಾಂತರ ಹೆಣ್ಣು ಮಕ್ಕಳು ನೊಂದು ಬೆಂದು ಎದ್ದಿದ್ದಾರೆ. ಅವರೆಲ್ಲರಿಗೂ ಈ ಪ್ರಶಸ್ತಿಯ ಶ್ರೇಯ ಸಲ್ಲಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕಿ ವಿಜಯಾ ಅವರುಪ್ರತಿಕ್ರಿಯಿಸಿದ್ದಾರೆ.
‘ನನ್ನ ಕೃತಿಯನ್ನು ಅಕಾಡೆಮಿ ಗುರುತಿಸಿರುವುದು ವಿಶೇಷ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವ ಪ್ರಾಜ್ಞರು ಒಂದು ಹೆಣ್ಣುಮಗುವಿನ ನೋವನ್ನು ಪರಿಗಣಿಸಿರುವುದು, ಇನ್ನೂ ನಮ್ಮ ನಡುವೆ ಆರ್ದ್ರಹೃದಯಗಳು ಇವೆ ಎನ್ನುವುದಕ್ಕೆ ಸಾಕ್ಷಿ’ ಎಂದು ಹೇಳಿದ್ದಾರೆ.
ಪ್ರಶಸ್ತಿ ಮೊತ್ತ ಸ್ವೀಕರಿಸುವೆ: ‘ನಾನು ಇದುವರೆಗೆ ಯಾವುದೇ ಅಕಾಡೆಮಿಯ ಪ್ರಶಸ್ತಿ ಜತೆಗೆ ಬಂದ ಹಣವನ್ನು ಸ್ವೀಕರಿಸಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಮಾಡುವುದಿಲ್ಲ. ಹಣವನ್ನು ಪಡೆದು, ಅದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸುತ್ತೇನೆ’ ಎಂದಿದ್ದಾರೆ.
‘ರಾಜ್ಯ ಸಾಹಿತ್ಯ ಅಕಾಡೆಮಿ, ಮಾಧ್ಯಮ ಅಕಾಡೆಮಿ, ನಾಟಕ ಅಕಾಡೆಮಿ ಪ್ರಶಸ್ತಿಗಳು ಬಂದಾಗಲೂ ಹಣ ಸ್ವೀಕರಿಸದೇ, ಆ ಹಣವನ್ನು ಸಮಾಜದ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಲು ಹೇಳಿದ್ದೆ. ಆದರೆ, ಈವರೆಗೂ ಯಾವುದೇ ಅಕಾಡೆಮಿಗಳು ಆ ರೀತಿ ಮಾಡಲಿಲ್ಲ. ಹಾಗಾಗಿ ಈ ಬಾರಿ ಹಿತೈಷಿಗಳು ಪ್ರಶಸ್ತಿ ಮೊತ್ತವನ್ನು ಸ್ವೀಕರಿಸಿ, ಅದನ್ನು ನಾನೇ ಸಮಾಜ ಕಲ್ಯಾಣಕ್ಕೆ ವಿನಿಯೋಗಿಸಬೇಕೆಂದು ಸಲಹೆ ನೀಡಿದ್ದಾರೆ. ಈ ಬಾರಿಯ ಪ್ರಶಸ್ತಿ ಮೊತ್ತವನ್ನು ನಾನು ಹೆಚ್ಚಾಗಿ ಗುರುತಿಸಿಕೊಂಡಿರುವ ಕಾರ್ಮಿಕ ವಲಯದ ಯಾವುದಾದರೂ ಕಾರ್ಮಿಕ ಕಲ್ಯಾಣ ಸಂಘಟನೆಯ ಚಟುವಟಿಕೆಗೆ ವಿನಿಯೋಗಿಸುತ್ತೇನೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.