ADVERTISEMENT

ಜನನಾಯಕರ ಹಿತಾಸಕ್ತಿಗೆ ಒತ್ತು: ವಚನಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 3:40 IST
Last Updated 23 ಫೆಬ್ರುವರಿ 2021, 3:40 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಬೆಂಗಳೂರು: ‘ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಭಾನುವಾರ ನಡೆದ ಮಹಾರ‍್ಯಾಲಿ ನಂತರ ಧರಣಿ, ಸತ್ಯಾಗ್ರಹ ಮಾಡಬಾರದು ಎಂದು ನಿರ್ಧಾರವಾಗಿತ್ತು. ಆದರೆ, ಜನನಾಯಕರ ಹಿತಾಸಕ್ತಿಗೋಸ್ಕರ ಧರಣಿ ಮುಂದುವರಿಸಲು ತೀರ್ಮಾನಿಸಿದ್ದಕ್ಕೆ ಬೇಸರವಾಗಿ ಹಿಂದೆ ಸರಿದಿದ್ದೇನೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

‘ಸಮಾವೇಶದಲ್ಲಿಯೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ ಗಲಾಟೆ ಆಗುತ್ತಿತ್ತು. ಇದರಿಂದ ಸಮುದಾಯದ ಘನತೆಗೆ ಚ್ಯುತಿಯಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ, ಸಮುದಾಯಕ್ಕೆ 2ಎ ಮೀಸಲಾತಿ ಬೇಕು ಎಂಬ ನಿಲುವಿಗೆ ಈಗಲೂ ಬದ್ಧವಾಗಿದ್ದೇನೆ’ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

‘ಸಮಾವೇಶದಲ್ಲಿ ಜನನಾಯಕರು ಆಡಿದ ಮಾತುಗಳು ನಮ್ಮ ಬೇಡಿಕೆಗೆ ಪೂರಕವಾಗಿರಲಿಲ್ಲ. ಸರ್ಕಾರದ ವಿರುದ್ಧ ದಾಳಿ ಮಾಡುವುದೇ ಉದ್ದೇಶವಾಗಿತ್ತು ಎಂಬಂತಿತ್ತು. ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಸಮರ್ಥವಾಗಿ ಇಡಬೇಕಾಗಿತ್ತೇ ವಿನಾ ವಾಗ್ದಾಳಿ ಅವಶ್ಯಕವಾಗಿರಲಿಲ್ಲ. ಸರ್ಕಾರದ ಕೈಯಲ್ಲಿ ಮೀಸಲಾತಿ ಎಂಬ ಬೆಣ್ಣೆ ಇದೆ. ಅದನ್ನು ಸುಗಮವಾಗಿ ಪಡೆಯುವ ಕೆಲಸವಾಗಬೇಕಾಗಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಒತ್ತಡವಿರಬಹುದು

‘ಆಡಳಿತಾರೂಢ ಪಕ್ಷದ ಒತ್ತಡದಿಂದ ಮಾತನಾಡಿರಬಹುದು. ಸಮುದಾಯದ ಸಚಿವರೂ ಕೂಡ ಸರ್ಕಾರಕ್ಕೆ ಮುಜುಗರ ತಪ್ಪಿಸಲು ಹಾಗೆ ಮಾತನಾಡಿದ್ದಾರೆ. ಜೊತೆಗೆ ಹೋರಾಡುತ್ತಿರುವವರೂ ನಮ್ಮವರೇ, ಹೋದವರೂ ನಮ್ಮವರೇ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ನಾನು ಹೇಳಿದ್ದೆ. ಅದರಂತೆ ಹೋರಾಟ ಮುಂದುವರಿಸುತ್ತಿದ್ದೇನೆ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.