ನರೇಂದ್ರ ಮೋದಿ
(ಪಿಟಿಐ ಚಿತ್ರ)
ಬೆಂಗಳೂರು: ಬೆಂಗಳೂರು-ಬೆಳಗಾವಿ ನಡುವಣ ಅತ್ಯಂತ ವೇಗದ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಚಾಲನೆ ನೀಡಿದ್ದಾರೆ.
ಇದರೊಂದಿಗೆ ಈ ಮಾರ್ಗದಲ್ಲಿ ಪ್ರಯಾಣದ ಅವಧಿ 80 ನಿಮಿಷಗಳಷ್ಟು ಉಳಿತಾಯ ಆಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲಿನ ವಾಣಿಜ್ಯ ಸಂಚಾರ ಸೋಮವಾರದಿಂದ ಆರಂಭವಾಗಲಿದೆ. ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಸಂಚಾರ ಇರಲಿದೆ ಎಂದು ನೈಋತ್ಯ ರೈಲ್ವೆ ವಲಯದ (ಎಸ್ಡಬ್ಲ್ಯುಆರ್) ಪ್ರಕಟಣೆ ತಿಳಿಸಿದೆ.
530 ಆಸನ ಸಾಮರ್ಥ್ಯದ ಎಂಟು ಬೋಗಿಗಳ ಆಸನ ವ್ಯವಸ್ಥೆಯನ್ನು ಇದು ಹೊಂದಿದೆ.
ಕೆಆಸ್ಆರ್ ಬೆಂಗಳೂರು-ಬೆಳಗಾವಿ ನಡುವಣ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 611 ಕಿ.ಮೀ. ದೂರವನ್ನು ಕೇವಲ 8.5 ಗಂಟೆಗಳಲ್ಲಿ ಕ್ರಮಿಸಲಿದೆ. ಆ ಮೂಲಕ ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲು ಎನಿಸಿಕೊಳ್ಳಲಿದ್ದು, ಇತರೆ ರೈಲುಗಳಿಗೆ ಹೋಲಿಸಿದರೆ ಸುಮಾರು 1 ಗಂಟೆ 20 ನಿಮಿಷ ಉಳಿತಾಯವಾಗಲಿದೆ ಎಂದು ತಿಳಿಸಿದೆ.
ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾದ ಧಾರವಾಡ, ವಾಣಿಜ್ಯ-ಕೈಗಾರಿಕಾ ಕೇಂದ್ರವಾದ ಹುಬ್ಬಳ್ಳಿ, ಬೆಳೆಯುತ್ತಿರುವ ಕೃಷಿ ಕೇಂದ್ರವಾದ ಹಾವೇರಿ, ಜವಳಿ-ಕೃಷಿಗೆ ಹೆಸರುವಾಸಿಯಾದ ದಾವಣಗೆರೆ ಮತ್ತು ಕೈಗಾರಿಕಾ-ಶೈಕ್ಷಣಿಕ ಕೇಂದ್ರವಾದ ತುಮಕೂರು ಮೂಲಕ ರೈಲು ಸಂಚರಿಸಲಿದೆ.
ಅತ್ಯಾಧುನಿಕ ವ್ಯವಸ್ಥೆಯು ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ವಿದ್ಯಾರ್ಥಿಗಳು, ವೃತ್ತಿಪರರು, ರೈತರು ಮತ್ತು ವ್ಯಾಪಾರಿಗಳಿಗೆ ಇದರಿಂದ ನೆರವಾಗಲಿದೆ.
ರಾಜ್ಯದ 11ನೇ ವಂದೇ ಭಾರತ್ ರೈಲು ಇದಾಗಿದೆ. ಹಾಗೆಯೇ ದೇಶದಲ್ಲಿ 75 ವಂದೇ ಭಾರತ್ ರೈಲುಗಳು 24 ರಾಜ್ಯಗಳಲ್ಲಿ ದೈನಂದಿನ 150 ಸಂಚಾರ ನಡೆಸುತ್ತಿದೆ ಎಂದು ರೈಲೈ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.