ADVERTISEMENT

ದೆಹಲಿಗೆ ಹೋಗಿ ಟಿಕೆಟ್ ಗಿಟ್ಟಿಸಲು ಮನಸ್ಸು ಒಪ್ಪಲಿಲ್ಲ: ಎಸ್.ಆರ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 20:00 IST
Last Updated 27 ನವೆಂಬರ್ 2021, 20:00 IST
ಎಸ್.ಆರ್. ಪಾಟೀಲ
ಎಸ್.ಆರ್. ಪಾಟೀಲ   

ಬೆಂಗಳೂರು: ‘ನನಗೆ ಟಿಕೆಟ್ ತಪ್ಪುತ್ತದೆ ಎಂದುಕೊಂಡಿರಲೇ ಇಲ್ಲ. ಯಾಕೆ ಹೀಗಾಯಿತು ಎನ್ನುವುದೂ ಗೊತ್ತಿಲ್ಲ. ಅವರೆಲ್ಲ (ತಮ್ಮನಿಗೆ ಟಿಕೆಟ್‌ಗಾಗಿ ಎಂ.ಬಿ. ಪಾಟೀಲ) ದೆಹಲಿಗೆ ಹೋಗಿದ್ದಾಗ ನಾನು ಹಳ್ಳಿಯಲ್ಲೇ ಇದ್ದೆ’ ಎಂದು ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿಕೊಂಡಿರುವ, ಹಾಲಿ ವಿರೋಧ ಪಕ್ಷದ ನಾಯಕ ಎಸ್‌. ಆರ್‌.ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾನು ಸ್ಥಾನಮಾನಕ್ಕಾಗಿ ಎಂದೂ ಲಾಬಿ ಮಾಡಿಲ್ಲ. ದೆಹಲಿವರೆಗೂ ಹೋಗಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮನಸ್ಸು ಒಪ್ಪ ಲಿಲ್ಲ.ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸಲು ನನಗೆ ಅಧಿಕಾರ ಬೇಕಿಲ್ಲ’ ಎಂದರು.

‘ಯಾವ ಅರ್ಹತೆ ಮೇಲೆ ಎಂ.ಬಿ.ಪಾಟೀಲ ಅವರ ತಮ್ಮನಿಗೆ ಟಿಕೆಟ್ ಕೊಟ್ಟಿದ್ದಾರೋ ಗೊತ್ತಿಲ್ಲ.ಅಧಿಕಾರಕ್ಕಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅಗತ್ಯ ನನಗೆ ಇಲ್ಲ. ಪಕ್ಷದ ತತ್ವ, ಸಿದ್ದಾಂತವಷ್ಟೇ ಮುಖ್ಯ, ಟಿಕೆಟ್‌ ತಪ್ಪಿದ್ದಕ್ಕೆ ಯಾವ ನಾಯಕರ ಕಡೆಗೂ ಬೊಟ್ಟು ಮಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ’ ಎಂದರು.

ADVERTISEMENT

‘ನನ್ನ ವಯಸ್ಸಿನ ಕಾರಣಕ್ಕೆ ಟಿಕೆಟ್ ತಪ್ಪಿದೆ ಎಂದೂ ಅನಿಸುತ್ತಿಲ್ಲ. ಮೇಲ್ಮನೆ ಅಂದ ಮೇಲೆ ಅಲ್ಲಿ ಹಿರಿಯರೇ ಇರುತ್ತಾರೆ ಅಲ್ಲವೇ? ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಕೆಲಸ ನಿಭಾಯಿಸಿದ್ದೇನೆ. ಆದರೂ ಟಿಕೆಟ್ ಕೊಟ್ಟಿಲ್ಲ’ ಎಂದರು.

‘ಟಿಕೆಟ್ ತಪ್ಪಿರುವ ಬಗ್ಗೆ ಈಗಾಗಲೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿದ್ದಾರೆ. ಕುಳಿತು ಮಾತನಾಡೋಣ ಎಂದೂ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ನನ್ನ ಜೊತೆ ಚರ್ಚಿಸಲಿಲ್ಲ. ಅವರಿಗೆ ಏನು ಕೆಲಸವಿತ್ತೋ ಏನೋ. ಕೆಪಿಸಿಸಿ ಅಧ್ಯಕ್ಷರು ಭೇಟಿ ಮಾಡಿ ಚರ್ಚಿಸಿದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.