ADVERTISEMENT

ನೀವು ಪುಣ್ಯವಂತರು; ಸದನಕ್ಕೆ ಗೈರಾಗಬೇಡಿ: ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್

ನೂತನ ಶಾಸಕರಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:28 IST
Last Updated 15 ನವೆಂಬರ್ 2018, 19:28 IST
   

ಬೆಂಗಳೂರು: 'ಯಾವುದೇ ಕಾರಣಕ್ಕೂ ಸದನಕ್ಕೆ ಗೈರಾಗಬೇಡಿ. ಯಾರೂ ಕುಳಿತುಕೊಳ್ಳಲಾರದ ಜಾಗದಲ್ಲಿ ಕುಳಿತುಕೊಳ್ಳಲು ನಿಮಗೆ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ' ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ನೂತನ ಶಾಸಕರಿಗೆ ಕಿವಿಮಾತು ಹೇಳಿದರು.

ವಿಕಾಸಸೌಧದಲ್ಲಿ ಉಭಯ ಸದನಗಳ ನೂತನ ಶಾಸಕರಿಗೆ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, 'ನಿಮ್ಮ ವಿಷಯ ಚರ್ಚೆಗೆ ಇಲ್ಲದಿದ್ದರೂ ಸದನಕ್ಕೆ ಬನ್ನಿ. ಕಾರ್ಯಸೂಚಿ ನೋಡಿಕೊಳ್ಳಿ. ನಿಮ್ಮ ಡ್ರೆಸ್ ಸೆನ್ಸ್ ಚೆನ್ನಾಗಿರಲಿ’ ಎಂದು ಸಲಹೆ ನೀಡಿದರು.

‘ಬಯಸಿದವರೆಲ್ಲಾ ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಸಿಗುವುದಿಲ್ಲ. ಆರು ಕೋಟಿ ಜನರ ಪೈಕಿ 224 ಶಾಸಕರು ಮತ್ತು 75 ವಿಧಾನಪರಿಷತ್ ಸದಸ್ಯರಿಗೆ ಮಾತ್ರ ಈ ಸದವಕಾಶ ಸಿಗುತ್ತದೆ. ಅದಕ್ಕೆ ನೀವು ಪುಣ್ಯವಂತರು' ಎಂದರು.

ADVERTISEMENT

'ಯಾವುದೋ ಅಗೋಚರ ಶಕ್ತಿ ನಿಮ್ಮ ಹಿಂದೆ ಇದ್ದರೆ ಮಾತ್ರ ನೀವು ಆ ಮೆಟ್ಟಿಲು ಹತ್ತಲು ಸಾಧ್ಯ. ರಾಜಕಾರಣದ ಬಗ್ಗೆ ಯಾರು ಎಷ್ಟೇ ಅಪಹಾಸ್ಯ ಮಾಡಿದರೂ ಟೀಕೆ ಮಾಡಿದರೂ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಷ್ಟೇ ಮಂದಿಗೆ ಮಾತ್ರ ಇಲ್ಲಿ ಪ್ರವೇಶಿಸಲು ಅವಕಾಶ ಇರುವುದು' ಎಂದೂ ವಿವರಿಸಿದರು.

'ನಾನು ಸಭಾಧ್ಯಕ್ಷನಾದಬಳಿಕ ಯಾವ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿಲ್ಲ. ಏಕೆಂದರೆ, ಮಾಧ್ಯಮಗಳು ತುಂಬಾ ಚುರುಕಾಗಿವೆ. ನಾವು ಯಾವುದೋ ಹುರುಪಿನಲ್ಲಿ ಏನೋ ಮಾತನಾಡಿದರೆ ಅದೇ ದೊಡ್ಡ ಸುದ್ದಿಯಾಗುತ್ತದೆ. ಸಭಾಧ್ಯಕ್ಷ ಸ್ಥಾನಕ್ಕೆ ಗೌರವ ತರುವ ಭಾರ ನನ್ನ ಮೇಲಿದೆ' ಎಂದರು.

'ಇತ್ತೀಚೆಗೆ ಶಾಸಕರಲ್ಲಿ ಕೇವಲ ಕಾಟಾಚಾರಕ್ಕೆ ಸಭೆಗೆ ಬರುವ, ಬಂದರೂ ಸಹಿ ಮಾಡಿ ಲಾಂಜ್‌ನಲ್ಲಿ ಕುಳಿತುಕೊಳ್ಳುವ ಪ್ರವೃತ್ತಿ ಹೆಚ್ಚಿದೆ' ಎಂದು ವಿಧಾನಪರಿಷತ್ತಿನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

'ರಾತ್ರಿ 9 ಗಂಟೆ ನಂತರ ಶಾಸಕರ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದೇವೆ. ಶಾಸಕರ ವೈಯಕ್ತಿಕ ಜೀವನಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶ. ಆದರೆ, ಆರೇಳು ಜನ ಬೆಂಬಲಿಗರು ಬರುತ್ತಾರೆ. ಬಿಡದೇ ಇದ್ದರೆ ಗದ್ದಲ ಎಬ್ಬಿಸುತ್ತಾರೆ. ಶಾಸಕರು ಮತ್ತು ಬೆಂಬಲಿಗರ ಕಾರ್ಯವೈಖರಿಯೂ ಬದಲಾಗಿದೆ. ಸಮಿತಿಗಳ ಕಾರ್ಯವೈಖರಿಯೂ ಅಷ್ಟೇ. ಪ್ರವಾಸ ಭತ್ಯೆ, ತುಟ್ಟಿ ಭತ್ಯೆ ಪಡೆಯುವ ಸಮಿತಿಗಳು ಎಂಬಂತಾಗಿವೆ. ಸಮಿತಿ ಸಭೆಗಳಲ್ಲಿ ಸಿಗುವಷ್ಟು ಮಾಹಿತಿ ಬೇರೆಲ್ಲೂ ಸಿಗುವುದಿಲ್ಲ' ಎಂದು ತಿಳಿಸಿದರು.

ನೂತನ ಶಾಸಕರ ನಿರಾಸಕ್ತಿ

ಬೆರಳೆಣಿಕೆಯಷ್ಟು ನೂತನ ಶಾಸಕರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ವಿಧಾನಸಭೆಗೆ ಮೊದಲ ಬಾರಿಗೆ 61 ಶಾಸಕರು ಆಯ್ಕೆಯಾಗಿದ್ದು, 17 ಮಂದಿ ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 78 ಶಾಸಕರು ಚುನಾಯಿತರಾಗಿದ್ದಾರೆ. ಈ‌ ಪೈಕಿ, ತರಬೇತಿ ಶಿಬಿರದ ಬೆಳಗ್ಗಿನ ಅವಧಿಯಲ್ಲಿ ಸುಮಾರು 30 ಶಾಸಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.