ADVERTISEMENT

ಸುಳ್ಳು ಆರೋಪಗಳ ಗಿಳಿ ಪಾಠ ಒಪ್ಪಿಸಿದ ಸುರ್ಜೇವಾಲಾ ಮಾತು ಆಘಾತ ತಂದಿದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 12:28 IST
Last Updated 23 ಸೆಪ್ಟೆಂಬರ್ 2020, 12:28 IST
ಬಿ.ವೈ.ವಿಜಯೇಂದ್ರ ಮತ್ತು  ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲ
ಬಿ.ವೈ.ವಿಜಯೇಂದ್ರ ಮತ್ತು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲ   

ಬೆಂಗಳೂರು: ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಬೆಂಗಳೂರಿಗೆ ಬಂದು ಯಾರೋ ಹೇಳಿಕೊಟ್ಟ ಮಾತುಗಳನ್ನು ಹಾಗೆಯೇ ಆಡುವ ಮೂಲಕ 'ಸುಳ್ಳು ಆರೋಪಗಳನ್ನು' ಮಾಡಿರುವುದು ಆಘಾತಕಾರಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಟ್ವೀಟಿಸಿದ್ದಾರೆ.

ಆರೋಪಗಳ ಕುರಿತು ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ಇದ್ದು, ಖಾಸಗಿ ಟಿವಿ ಚಾನೆಲ್‌ ಪ್ರಸಾರ ಮಾಡಿರುವ ಮಾನ ಹಾನಿ ಮಾಡುವಂತಹ ಆರೋಪಗಳನ್ನೇ ಮುಂದಿಟ್ಟು ಕಾಂಗ್ರೆಸ್‌ನ ಸುರ್ಜೇವಾಲಾ ಗಿಳಿ ಪಾಠ ಒಪ್ಪಿಸಿರುವುದಾಗಿ ಹೇಳಿದ್ದಾರೆ.

ನ್ಯೂಸ್‌ ಚಾನೆಲ್‌ ಪ್ರಸಾರ ಮಾಡಿರುವುದು ಸುಳ್ಳು ವರದಿಗಳು ಎಂಬುದು ಸುರ್ಜೇವಾಲಾ ಅವರಿಗೆ ಅರಿವಿದೆಯೇ, ಮಾನಹಾನಿ ಮಾಡುವಂತಹ ಕಾರ್ಯಕ್ರಮ ಪ್ರಸ್ತಾರ ಮಾಡಿರುವ ಖಾಸಗಿ ಚಾನೆಲ್‌ನ ವಕ್ತಾರಂತೆ ಸುರ್ಜೇವಾಲಾ ವರ್ತಿಸಿರುವುದು ಹಾಗೂ ಅವರ ಸುಳ್ಳು ಮತ್ತು ಆರೋಪಗಳನ್ನು ಹೊರಹಾಕಿರುವುದು ವಿಷಾದದ ಸಂಗತಿ ಎಂದು ವಿಜಯೇಂದ್ರ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹಾಗೂ ಸಮರ್ಥ ಆಡಳಿತ ನೀಡಲು ವಿಫಲವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲ ಮಾಧ್ಯಮ ಗೋಷ್ಟಿಯಲ್ಲಿ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.