ADVERTISEMENT

ವೀಸಾ ಆಮಿಷವೊಡ್ಡಿ ಐಐಎಸ್ಸಿ ಅಧಿಕಾರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 7:31 IST
Last Updated 14 ಡಿಸೆಂಬರ್ 2019, 7:31 IST
   

ಬೆಂಗಳೂರು: ಕೆನಡಾ ದೇಶದ ವೀಸಾ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕರು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮುಖ್ಯ ತಾಂತ್ರಿಕ ಅಧಿಕಾರಿಯೊಬ್ಬರಿಂದ ₹3.70 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ವಂಚನೆ ಬಗ್ಗೆ ಅಧಿಕಾರಿ ದೂರು ನೀಡಿದ್ದಾರೆ. ಡೇವಿಡ್, ವಿಲಿಯಮ್ಸ್ ಥಾಮಸ್, ಲೀಲಾ ಹಾಗೂ ತಿಂಗರೀಲಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆನಡಾ ದೇಶದಲ್ಲಿ ಸಂಶೋಧನೆ ಮಾಡಬೇಕೆಂಬ ಆಸೆ ತಾಂತ್ರಿಕ ಅಧಿಕಾರಿಗೆ ಇದೆ. ಇತ್ತೀಚೆಗೆ ಅವರಿಗೆ ಕರೆ ಮಾಡಿದ್ದ ಡೇವಿಡ್‌ ಎಂಬಾತ ತಮ್ಮ ಸಂಶೋಧನಾ ಕಂಪನಿಯ ಕೆನಡಾ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶವಿರುವುದಾಗಿ ತಿಳಿಸಿದ್ದ. ವೀಸಾ ಪಡೆಯಲು ದೆಹಲಿಯ ಕೆನಡಾ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ವಿಲಿಯಮ್ಸ್ ಥಾಮಸ್‌ನನ್ನು ಸಂಪರ್ಕಿಸುವಂತೆ ತಿಳಿಸಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

’ವಿಲಿಯಮ್ಸ್ ಥಾಮಸ್‌ನನ್ನು ಸಂಪರ್ಕಿಸಿದ್ದ ಅಧಿಕಾರಿ, ಆತ ಕಳುಹಿಸಿದ್ದ ಅರ್ಜಿಗಳನ್ನು ಭರ್ತಿ ಮಾಡಿದ್ದರು. ಆತ ಹೇಳಿದಂತೆ ವೀಸಾ ಪಡೆಯಲು ಬ್ಯಾಂಕ್‌ನಲ್ಲಿ ₹ 3.70 ಲಕ್ಷ ಜಮೆ ಸಹ ಮಾಡಿದ್ದರು. ಅದಾದ ಬಳಿಕ ವೀಸಾ ನೀಡಿರಲಿಲ್ಲ. ಆ ಬಗ್ಗೆ ವಿಚಾರಿಸಿದಾಗ ಪುನಃ ₹7 ಲಕ್ಷ ಜಮೆ ಮಾಡುವಂತೆ ಆರೋಪಿ ಹೇಳಿದ್ದ. ಅವಾಗಲೇ ಅನುಮಾನ ಬಂದು ಅಧಿಕಾರಿ ದೂರು ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.