ADVERTISEMENT

ಪ್ರಜಾಪ್ರಭುತ್ವದ ಗೆಲುವು, ಸರ್ವಾಧಿಕಾರಿ ತತ್ವದ ಸೋಲು-:

ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2018, 9:19 IST
Last Updated 6 ನವೆಂಬರ್ 2018, 9:19 IST
ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ವಿ.ಎಸ್‌.ಉಗ್ರಪ್ಪ ಸಂತಸ
ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ವಿ.ಎಸ್‌.ಉಗ್ರಪ್ಪ ಸಂತಸ   

ಬಳ್ಳಾರಿ: ‘ನನ್ನದು ಪ್ರಜಾಪ್ರಭುತ್ವದ ಗೆಲುವು. ಸರ್ವಾಧಿಕಾರಿ ಹಾಗೂ ಜನವಿರೋಧಿ ತತ್ವದ ಸೋಲು’ ಎಂದು ಲೋಕಸಭೆ ಉಪಚುನಾವಣೆಯ ವಿಜೇತ ಅಭ್ಯರ್ಥಿ, ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಪ್ರತಿಪಾದಿಸಿದರು.

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನದು ಅಧಿಕಾರದ ದುರುಪಯೋಗದಿಂದ ಗೆದ್ದ ಗೆಲುವು ಅಲ್ಲ. ಜನಾದೇಶ ತಂದುಕೊಟ್ಟ ಗೆಲುವು. ಅದನ್ನು ಅಲ್ಲಗೆಳೆದಿರುವ ಬಿಜೆಪಿ ಶಾಸಕ ಬಿ,ಶ್ರೀರಾಮುಲು ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು.

‘ಹಗರಣಗಳಿಂದ ಗಮನ ಸೆಳೆದ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಸಂದೇಶವನ್ನೂ ಫಲಿತಾಂಶ ನೀಡಿದೆ. ೨೦೧೯ರ ಚುನಾವಣೆಗೆ ಫಲಿತಾಂಶವು ದಿಕ್ಸೂಚಿಯಾಗಲಿದೆ’ ಎಂದರು.

ADVERTISEMENT

‘ ಅಭಿವೃದ್ಧಿ ನಿರಂತರ ಪ್ರಕ್ರಿಯೆ. ಲೋಕಸಭೆಯ ಉಳಿದಿರುವ ನಾಲ್ಕೈದು ತಿಂಗಳ ಅವಧಿಯಲ್ಲಿ ಈ ಭಾಗದ ಜನರ ಸಮಸ್ಯೆಗಳನ್ನು ಅರಿತು ಕಾರ್ಯ ನಿರ್ವಹಿಸುವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವೆ ಎಂಬ ಭರವಸೆ ನೀಡಲಾರೆ’ ಎಂದರು.

‘ಕೊನೆ ಉಸಿರಿರುವರೆಗೆ ಬಳ್ಳಾರಿಯಲ್ಲೇ ಇರುವೆ. ಬಳ್ಳಾರಿ ನನ್ನ ಮೊದಲ ಮನೆ. ನಾನು ಹೊರಗಿನವನು ಎಂದ ಬಿಜೆಪಿ ಪಾಠ ಕಲಿತಿದೆ’ ಎಂದರು.

‘ಪಕ್ಷದ ಎಲ್ಲ ನಾಯಕರು ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಸಹಕರಿಸಿ ಆಶೀರ್ವದಿಸಿದ್ದಾರೆ. ದೊಡ್ಡ ಬಹುಮತದಿಂದ ಲೋಕಸಭೆಗೆ ಆಯ್ಕೆ ಮಾಡಿ ಕಳಿಸುತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆ ಗಳಿಗೆ ಸ್ಪಂದಿಸುವೆ. ಮನೆಯ ಮಗನಾಗಿ, ಸಹೋದರನಾಗಿ ಮತ್ತು ಸ್ನೇಹಿತನಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವೆ. ಬದ್ಧತೆಯನ್ನು ಬಿಟ್ಟುಕೊಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.