ADVERTISEMENT

ಒಕ್ಕಲಿಗರ ಸಂಘ: ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 19:45 IST
Last Updated 11 ಡಿಸೆಂಬರ್ 2021, 19:45 IST
   

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ ಭಾನುವಾರ (ಡಿ. 12) ಚುನಾವಣೆ ನಡೆಯಲಿದೆ.ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ, ಡಿ. 15ರಂದು ಮತ ಎಣಿಕೆ ನಡೆಯಲಿದೆ.

ಒಕ್ಕಲಿಗ ಸಮುದಾಯದ ಘಟಾನು ಘಟಿ ಮುಖಂಡರು ‘ಗುಂಪು’ ಕಟ್ಟಿ ಕೊಂಡು ಅಖಾಡಕ್ಕೆ ಇಳಿದಿದ್ದಾರೆ. ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಅ. ದೇವೇಗೌಡ, ನಿವೃತ್ತ ಕುಲಪತಿ ಕೆ. ನಾರಾಯಣಗೌಡ, ವೈದ್ಯರಾದ ಡಾ. ಆಂಜಿನಪ್ಪ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ, ಸಂಘದ ಮಾಜಿ ನಿರ್ದೇಶಕ ಪ್ರೊ. ನಾಗರಾಜ್‌, ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌, ವಕೀಲ ಎನ್‌.ಎಂ. ಸೊಣ್ಣೇಗೌಡ ಮೊದಲಾದವರು ತಮ್ಮದೇ ಸಿಂಡಿಕೇಟ್‌ ಮಾಡಿಕೊಂಡು ಸ್ಪರ್ಧೆಯಲ್ಲಿದ್ದಾರೆ.

ಸಂಘದಲ್ಲಿ ರಾಜ್ಯದಾದ್ಯಂತ ಅರ್ಹ 5.21 ಲಕ್ಷ ಸದಸ್ಯರಿದ್ದಾರೆ. ಬೆಂಗಳೂರು ಮಹಾನಗರ ಸೇರಿ ಮೂರು ಜಿಲ್ಲೆಗಳಲ್ಲಿ 15 ಸ್ಥಾನಗಳಿಗೆ 1.92 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಉಳಿದ 20 ಸ್ಥಾನಗಳಿಗೆ ಇತರೆ ಜಿಲ್ಲೆಗಳಿಂದ ಆಯ್ಕೆ ನಡೆಯಲಿದೆ.

ADVERTISEMENT

ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯನ್ನು ಒಳ ಗೊಂಡಂತೆ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಮೂರೂ ಜಿಲ್ಲೆಗಳಿಂದ ಒಟ್ಟು 141 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಿಂದಿನ ಅವಧಿಯಲ್ಲಿ 3–4 ಬಾರಿ ಸಮಿತಿಯಲ್ಲಿ ಇದ್ದವರ ಜೊತೆಗೆ, ಈ ಬಾರಿ ಹೊಸಬರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.