ADVERTISEMENT

ವಿ.ಎಸ್.ಪಾಟೀಲ ಪುತ್ರ ಕಾಂಗ್ರೆಸ್‌ಗೆ!

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 16:42 IST
Last Updated 19 ನವೆಂಬರ್ 2019, 16:42 IST
ಬಾಪುಗೌಡ ಪಾಟೀಲ
ಬಾಪುಗೌಡ ಪಾಟೀಲ   

ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಅವರ ಪುತ್ರ ಬಾಪುಗೌಡ ಪಾಟೀಲ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಮಂಗಳವಾರ ಸಂಜೆ ಘೋಷಿಸಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಎದುರಾಳಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ ಕಡಿಮೆ ಅಂತರದ ಮತಗಳಿಂದ ಸೋತಿದ್ದರು. ಉಪ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪಾಟೀಲರನ್ನು ಸಮಾಧಾನಪಡಿಸಲು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ನೀಡಿದ್ದರು.

ಚುನಾವಣೆ ಕಣ ರಂಗೇರುತ್ತಿರುವಾಗಲೇ ಬಾಪುಗೌಡ ಕಾಂಗ್ರೆಸ್‌ ಕದ ತಟ್ಟಿದ್ದಾರೆ. ‘ಅಪಾರ ಬೆಂಬಲಿಗರೊಂದಿಗೆ ನ.22ರಂದು ಕಾಂಗ್ರೆಸ್ ಸೇರುತ್ತೇನೆ. ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ. ‘ಮಗನ ಜೊತೆ ನನಗೆ ಸಂಪರ್ಕವಿಲ್ಲ. ಅವನ ನಿರ್ಧಾರದ ಬಗ್ಗೆ ಚರ್ಚಿಸುವುದೂ ಇಲ್ಲ. ಆತ ಕಾಂಗ್ರೆಸ್ ಸೇರುವುದರಿಂದ ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿದ್ದಷ್ಟೇ ಮತಗಳನ್ನು ಈ ಬಾರಿಯೂ ಬಿಜೆಪಿಗೆ ಹಾಕಿಸುವ ಜವಾಬ್ದಾರಿ ನನ್ನದು’ ಎಂದು ವಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.