ಕೋಲಾರ: ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಟಾಪಟಿ ನಡೆದು ಮಹಿಳೆಯ ಕಿವಿ ಕತ್ತರಿಸಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕದರಿಗಾನಕುಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಇಂದಿರಮ್ಮ ಮತ್ತು ಯಶೋದಾ ಎಂಬುವರ ನಡುವೆ ನಲ್ಲಿ ನೀರು ಹಿಡಿದುಕೊಳ್ಳುವ ವಿಚಾರವಾಗಿ ಮೇ 7ರಂದು ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಯಶೋದಾ ಅವರು ಇಂದಿರಮ್ಮ ಮೇ 9ರಂದು ಹಸು ಹಿಡಿದುಕೊಂಡು ನಡೆದು ಹೋಗುತ್ತಿದ್ದಾಗ ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ.
ನಂತರ ಯಶೋದಾ, ಅವರ ಪತಿ ಹೊಸರಾಯಪ್ಪ, ಮಕ್ಕಳಾದ ಸಂತೋಷ್, ಮಂಜುನಾಥ್ ಹಾಗೂ ಸೊಸೆ ಶಶಿ ಒಟ್ಟಾಗಿ ಇಂದಿರಮ್ಮನ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಕಿವಿಗಳನ್ನು ಬ್ಲೇಡ್ನಿಂದ ತುಂಡರಿಸಿ ಓಲೆ ದೋಚಿದ್ದಾರೆ. ಇಂದಿರಮ್ಮನ ರಕ್ಷಣೆಗೆ ಧಾವಿಸಿದ ಪತಿ ರಘುಪತಿ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದಿರಮ್ಮ ಜಿಲ್ಲಾ ಕೇಂದ್ರದ ಶ್ರೀ ನರಸಿಂಹರಾಜ (ಎಸ್ಎನ್ಆರ್) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಬೇತಮಂಗಲ ಠಾಣೆ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿದ್ದು, ಅವರೆಲ್ಲರೂ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.