ತುಮಕೂರು: ಜಿಲ್ಲೆಯ ಪ್ರವಾಸಿ ಕ್ಷೇತ್ರವಾದ ಸಿದ್ಧರಬೆಟ್ಟದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬೆಟ್ಟದಲ್ಲಿನ ಸಿದ್ದೇಶ್ವರ ದೇವಸ್ಥಾನ ಬಳಿಯ ಹೊಂಡದಲ್ಲಿ ನೀರು ಖಾಲಿ ಆಗಿದೆ.
ಈ ಹೊಂಡದ ನೀರಿನಲ್ಲಿಯೇ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದರು. ಈಗ ದೇವಸ್ಥಾನದ ಮುಂದೆ ಭಕ್ತರನ್ನು ನಿಲ್ಲಿಸಿ ನೀರು ಪ್ರೋಕ್ಷಿಸಲಾಗುತ್ತಿದೆ!
ಬೆಟ್ಟದ ಕೆಳಗಿನ ಕಲ್ಯಾಣಿಯು ಬತ್ತಿದೆ. ಹರಕೆ ಹೊತ್ತು ಮುಡಿ (ಕೂದಲು) ತೆಗೆಸಲು ಬರುವ ಭಕ್ತರು ಮನೆಯಿಂದಲೇ ವಾಹನದಲ್ಲಿ ನೀರು ತೆಗೆದುಕೊಂಡು ಬರುತ್ತಿದ್ದಾರೆ.
ಸಿದ್ಧಗಂಗಾಮಠದಲ್ಲಿ ಸದ್ಯಕ್ಕೆ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಇಲ್ಲ. ‘ಈಗ ಭಕ್ತರು ಹೆಚ್ಚು ಜನರು ಬಂದರೂ ನಿಭಾಯಿಸಬಹುದು. ಜೂನ್ 1ರಿಂದ ಶಾಲೆಗಳು ಪ್ರಾರಂಭವಾಗಲಿವೆ. ವಸತಿ ಶಾಲೆಗೆ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕ ಕಾಲಕ್ಕೆ ಬರುತ್ತಾರೆ. ಆಗ ಸಮಸ್ಯೆಯಾಗುವ ಸಾಧ್ಯತೆ ಇದೆ’ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇಲ್ಲ. ಮಾರ್ಕೋನಹಳ್ಳಿ ಜಲಾಶಯ ಹಿನ್ನೀರು ಇದ್ದು, ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿಲ್ಲ.
ದೇವರಾಯನ ದುರ್ಗ, ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಗಳಲ್ಲಿ ನೀರಿನ ಸಮಸ್ಯೆ ಸದ್ಯಕ್ಕೆ ಎದುರಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.