ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಚರ್ಚೆ: ಸಚಿವ ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 10:45 IST
Last Updated 3 ಜೂನ್ 2023, 10:45 IST
Venugopala K.
   Venugopala K.

ಮೈಸೂರು: ‘ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗುವುದು‘ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ ಮತ್ತು ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ ಹಸುವನ್ನು ಕಡಿಯಲು ಅವಕಾಶ ಇಲ್ಲ, ಹಸುವನ್ನು ಯಾಕೆ ಕಡಿಯಬಾರದು? ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ಸ್ವತಃ ನಾನು ಹಸುವನ್ನು ಸಾಕಿದ್ದೇನೆ. ಒಂದು ಹಸು ಸತ್ತುಹೋದಾಗ ಅದನ್ನು ಮಣ್ಣು ಮಾಡಲು ಕಷ್ಟಪಡಬೇಕಾಯಿತು’ ಎಂದರು.

‘ರೇಷ್ಮೆ ಬೆಲೆ ಭಾರಿ ಕುಸಿತವಾಗಿರುವ ವಿಷಯವನ್ನು ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ವಿಭಾಗದ ಮೂಲಕ ರೇಷ್ಮೆ ಖರೀದಿಗೆ ಆದೇಶ ನೀಡಲಾಗಿದ್ದು, ಈಗಾಗಲೇ ಖರೀದಿ ಆರಂಭವಾಗಿದೆ. ಸರ್ಕಾರ ಖರೀದಿ ಆರಂಭಿಸಿದ ನಂತರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದರು.

ADVERTISEMENT

ಸಿಬ್ಬಂದಿ ಕೊರತೆ: ‘ಪಶುಸಂಗೋಪನೆ ಬಹಳ ದೊಡ್ಡ ಇಲಾಖೆ, ಅದರೆ ಕೆಲಸ ಮಾಡಲು ಸಿಬ್ಬಂದಿಯ ಕೊರತೆ ಇದೆ. ಇಲಾಖೆಗೆ ಮಂಜೂರಾಗಿರುವ ಸಿಬ್ಬಂದಿ ಸಂಖ್ಯೆ 18,000, ಆದರೆ ಹಾಲಿ ಇರುವ ಸಿಬ್ಬಂದಿ ಸಂಖ್ಯೆ 9 ಸಾವಿರ ಮಾತ್ರ. ರಾಜ್ಯದಲ್ಲಿ 4,234 ಪಶು ಆಸ್ಪತ್ರೆಗಳಿದ್ದು, 1600 ವೈದ್ಯರ ಕೊರತೆ ಇದೆ. 400 ವೈದ್ಯರ ನೇಮಕಾತಿಗೆ ಪರೀಕ್ಷೆ ನಡೆಸುವಂತೆ ರಾಜ್ಯ ಲೋಕಸೇವಾ ಆಯೋಗ‌ಕ್ಕೆ ಸರ್ಕಾರ ಆದೇಶಿಸಿದೆ’ ಎಂದರು.

ಅಮೂಲ್‌ ರಾಜ್ಯಕ್ಕೆ ಬಂದಿಲ್ಲ, ಬಂದಾಗ ನೋಡುವ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.