ADVERTISEMENT

ಉಪಚುನಾವಣೆಗಳಲ್ಲಿ ಗೆಲುವು ನಮ್ಮದೇ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 6:49 IST
Last Updated 13 ನವೆಂಬರ್ 2019, 6:49 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಮತ್ತು ಉಪಚುನಾವಣೆಗಳ ಕಾರ್ಯತಂತ್ರದ ಬಗ್ಗೆ ಇಂದು ಸಂಜೆ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಉಪ ಚುನಾವಣೆ ಉಸ್ತುವಾರಿಗಾಗಿ ಎಲ್ಲ 17 ಕ್ಷೇತ್ರಗಳಿಗೆ ಒಬ್ಬೊಬ್ಬ ಸಚಿವರನ್ನು ನಿಯೋಜಿಸಲಾಗುವುದು. ನಾವು ಗೆಲ್ಲುವುದು ನೂರಕ್ಕೆ ನೂರೊಂದರಷ್ಟು ಖಚಿತ. ಈ ಬಗ್ಗೆ ಬಿಜೆಪಿಗೆ ಅನುಮಾನವೇ ಇಲ್ಲ’ ಎಂದು ಯಡಿಯೂರಪ್ಪ ಆತ್ಮವಿಶ್ವಾಸ ಪ್ರದರ್ಶಿಸಿದರು.‌

‘ಸುಪ್ರೀಂಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಬೇರೆಬೇರೆ ಕಡೆ ಇರುವ ಅನರ್ಹ ಶಾಸಕರು ಸಂಜೆಯ ಹೊತ್ತಿಗೆ ನಗರಕ್ಕೆ ಹಿಂದಿರುಗುವ ನಿರೀಕ್ಷೆ ಇದೆ. ಅವರೆಲ್ಲರ ಜೊತೆಗೆ ಸಮಾಲೋಚನೆ ನಡೆಸಿ, ಮುಂದಿನ ನಡೆಯನ್ನು ಪ್ರಕಟಿಸಲಾಗುವುದು’ ಎಂದು ಹೇಳಿದರು.

ಶರತ್ ಬಚ್ಚೇಗೌಡ ಸೇರಿದಂತೆ ಉಪಚುನಾವಣೆಯಲ್ಲಿ ಬಂಡಾಯದ ದನಿ ಮೊಳಗಿಸಿರುವ ನಾಯಕರು ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಜೊತೆಯಲ್ಲಿರುವವರ ಬಗ್ಗೆ ಮಾತ್ರ ನಾನು ಏನಾದರೂ ಹೇಳುತ್ತೇನೆ. ಉಳಿದವರ ವಿಷಯ ನನಗೆ ಬೇಡ’ ಎಂದರು.

ಮುಂಬರುವ ಉಪಚುನಾವಣೆಗಳಲ್ಲಿ ಕನಿಷ್ಠ ಏಳೆಂಟು ಸ್ಥಾನಗಳಲ್ಲಿಯಾದರೂ ಬಿಜೆಪಿ ಜಯಗಳಿಸಲೇ ಬೇಕಿದೆ. ಅನರ್ಹ ಶಾಸಕರಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಸುಪ್ರೀಂಕೋರ್ಟ್‌ ತೀರ್ಮಾನ ಬಿಜೆಪಿಗೆ ವರದಾನವೆಂದೇವಿಶ್ಲೇಷಿಸಲಾಗುತ್ತಿದೆ. ಅವರಿಗೆ ಟಿಕೆಟ್ ಕೊಡಲು ಪಕ್ಷದ ರಾಜ್ಯ ನಾಯಕರುತೀರ್ಮಾನಿಸಿದರೆ ಸ್ಥಳೀಯವಾಗಿ ಅವರನ್ನು ವಿರೋಧಿಸಿಕೊಂಡು ರಾಜಕಾರಣ ಮಾಡುತ್ತಿದ್ದ ಸ್ಥಳೀಯ ನಾಯಕರ ಬಂಡಾಯದ ಬೇಗೆ ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.