ADVERTISEMENT

ಬೇಸಿಗೆಗೂ ಮುನ್ನವೇ ಬಿಸಿಲ ತಾಪ; ಸಂಜೆಯಾಗುತ್ತಿದ್ದಂತೆ ಸೆಕೆಗೆ ಜನ ತತ್ತರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 19:34 IST
Last Updated 1 ಮಾರ್ಚ್ 2021, 19:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಾದ್ಯಂತ ಬೇಸಿಗೆಗೂ ಮುನ್ನವೇ ಒಂದು ವಾರದಿಂದ ತಾಪಮಾನ ಏರುತ್ತಿದೆ. ‘ಕಲಬುರ್ಗಿಯಲ್ಲಿ ಈಗಲೇ 38 ಡಿಗ್ರಿ ಸೆಲ್ಸಿಯಸ್‌ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಏಪ್ರಿಲ್‌ ವೇಳೆಗೆ 45 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರುವ ನಿರೀಕ್ಷೆ ಇದೆ’ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

‘ಫೆಬ್ರುವರಿಯಲ್ಲಿ ಮಳೆ ಸುರಿಯುವುದು ವಿರಳ. ಆದರೆ,ಈ ಬಾರಿ ಹವಾವಾನ ವೈಪರೀತ್ಯದಿಂದ ಫೆಬ್ರುವರಿಯಲ್ಲಿ ಅಕಾಲಿಕ ಮಳೆ ಸುರಿಯಿತು. ಇದರ ಪರಿಣಾಮ ಬೇಸಿಗೆಯ ಆರಂಭಕ್ಕೂ ಮುನ್ನವೇ ತಾಪಮಾನ ಏರುತ್ತಿದೆ.ಈ ವಾರದಲ್ಲಿ ಚಳಿ ಮರೆಯಾಗುತ್ತಿದ್ದು, ಒಣಹವೆಯಿಂದ ಸಂಜೆ ವೇಳೆ ದಿಢೀರ್‌ ಸೆಕೆಯೂ ಆರಂಭಗೊಂಡಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಈ ಅವಧಿಯಲ್ಲಿ ಸರಾಸರಿ ತಾಪಮಾನವಿತ್ತು. ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ಎಂದರೂ 38ರಿಂದ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೆ, ಈ ಬಾರಿ ಬೇಸಿಗೆಗೆ ಕಾಲಿಡುವ ಮುನ್ನವೇ ಕಲಬುರ್ಗಿಯಲ್ಲಿ ಎರಡು ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದೇ ರೀತಿ ತಾಪಮಾನ ಏರಿದರೆ, ರಾಜ್ಯದಲ್ಲಿ ಮುಂದಿನ ವಾರದಲ್ಲಿ ಮಳೆಯಾಗುವ ಲಕ್ಷಣಗಳೂ ಇವೆ’ ಎಂದವರು ಹೇಳಿದರು.

ADVERTISEMENT

ಎಲ್ಲೆಲ್ಲಿ ಎಷ್ಟು ತಾಪಮಾನ?:ಕಲಬುರ್ಗಿಯಲ್ಲಿಸೋಮವಾರ ಗರಿಷ್ಠ 38.6 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 37, ಕೊಪ್ಪಳ 36, ಕಾರವಾರ, ವಿಜಯಪುರ, ಗದಗದಲ್ಲಿ ತಲಾ 35, ದಾವಣಗೆರೆ, ಹಾವೇರಿ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ತಾಪಮಾನ ದಾಖಲಾಗಿದೆ. ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ತಲಾ 12 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.