ಧಾರವಾಡ: ಮಗಳು ಪ್ರೇಮವಿವಾಹವಾಗಿದ್ದಕ್ಕೆ ಕೋಪಗೊಂಡ ಕಾನ್ಸ್ಟೆಬಲ್,ಉಪನೋಂದಣಾಧಿಕಾರಿ ಕಚೇರಿಗೆ ನುಗ್ಗಿ ವಿವಾಹ ನೋಂದಣಿ ಪತ್ರ ಹರಿದುಹಾಕಿ ಗುರುವಾರ ಗಲಾಟೆ ಮಾಡಿದ್ದಾರೆ.
ನವಲಗುಂದ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಎಸ್.ಎಚ್.ಹುಲಗೇರಿ ಅವರ ಪುತ್ರಿ, ಪ್ರಿಯಕರನೊಂದಿಗೆ ಗುರುವಾರ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾದರು.
ಮಾಹಿತಿ ಪಡೆದ ಹುಲಗೇರಿ, ಕಚೇರಿಗೆ ಬಂದು ಪ್ರಮಾಣ ಪತ್ರವನ್ನು ಅಧಿಕಾರಿಗಳಿಂದ ಕೇಳಿದ್ದಾರೆ.ಪೊಲೀಸ್ ಸಮವಸ್ತ್ರದಲ್ಲಿ ಬಂದ ಹುಲಗೇರಿ ಅವರನ್ನು ಕಂಡ ಅಲ್ಲಿನ ಸಿಬ್ಬಂದಿ, ತನಿಖೆಗೆ ಬಂದಿರಬಹುದು ಎಂದುಕೊಂಡು ಪ್ರಮಾಣ ಪತ್ರ ನೀಡಿದ್ದಾರೆ. ಅದನ್ನು ಪಡೆಯುತ್ತಿದ್ದಂತೆ ಕಾನ್ಸ್ಟೆಬಲ್ ಹರಿದುಹಾಕಿ ಅಧಿಕಾರಿಗಳನ್ನು ನಿಂದಿಸಿದ್ದಾರೆ. ಈ ಅನಿರೀಕ್ಷಿತ ಸನ್ನಿವೇಶದಿಂದ ವಿಚಲಿತರಾದ ಅಲ್ಲಿನ ಸಿಬ್ಬಂದಿ, ಕಚೇರಿಯ ಬಾಗಿಲು ಹಾಕಿ ಇವರನ್ನು ಕೂಡಿಹಾಕಿದ್ದಾರೆ.
ನಂತರ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಹಣ ಪಡೆದು ಮಗಳ ವಿವಾಹ ನೋಂದಣಿ ಮಾಡಿದ್ದು, ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಗ ಅಲ್ಲಿಗೆ ಬಂದ ಉಪನಗರ ಠಾಣೆ ಪೊಲೀಸರು, ಕಾನ್ಸ್ಟೆಬಲ್ ಹುಲಗೇರಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಮೊದಲೇ ಹುಲಗೇರಿ ಅವರ ಪುತ್ರಿ ವಿವಾಹ ನೋಂದಣಿ ಮಾಡಿಸಿ ಹೊರಟುಹೋಗಿದ್ದರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.