ADVERTISEMENT

ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬಕ್ಕೆ ಕಾರಣವೇನು: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2023, 8:10 IST
Last Updated 15 ಜುಲೈ 2023, 8:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜ್ಯ ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 2 ತಿಂಗಳಾದರೂ ಬಿಜೆಪಿಯು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದಿರುವುದಕ್ಕೆ ಕಾರಣಗಳೇನು ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಕೇಳಿದೆ.

ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿನ ತಿರಸ್ಕಾರವೇ, 66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ, ಆಂತರಿಕ ಕಚ್ಚಾಟದಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಲಾಗದ ತೊಳಲಾಟವೇ ಅಥವಾ ಆ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಮುಂದುವರಿದು, ಇನ್ನೂ ನಿಗದಿಪಡಿಸಿದ ಮೊತ್ತಕ್ಕೆ ಬಿಡ್ಡಿಂಗ್ ಆಗಿಲ್ಲವೇ, ನಮ್ಮ ಸರ್ಕಾರವನ್ನು ವಿರೋಧಿಸಲು ಸಕಾರಣಗಳು ಸಿಗುವುದಿಲ್ಲ ಎಂಬ ನಿರಾಸೆಯೇ? ಅಥವಾ ಬಿಜೆಪಿ ಸೋಲಿನ ಅಘಾತದಿಂದ ಇನ್ನೂ ಸುಧಾರಿಸಿಕೊಂಡಿಲ್ಲವೇ ಎಂದು ವ್ಯಂಗ್ಯವಾಡಿದೆ.

ADVERTISEMENT

ಶಾಸನ ಸಭೆಗೆ ಸಂಬಂಧಿಸಿದ ನೀತಿ ನಿಯಮಗಳನ್ನು ತಿಳಿದಿರುವಂತಹ ನಾಯಕರ ಕೊರತೆಯೇ, ಸಂತೋಷ್ vs ಯಡಿಯೂರಪ್ಪನವರ ಆಂತರಿಕ ಯುದ್ಧದ ಪರಿಣಾಮವೇ, ಒಟ್ಟಾರೆ ಕಾರಣವೇನು ಎನ್ನುವುದನ್ನಾದರೂ ರಾಜ್ಯದ ಜನತೆಗೆ ತಿಳಿಸಲಿ ಎಂದು ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.