ಬೆಂಗಳೂರು: ಹುಲಿಯ ಹೊರತಾಗಿ ಇತರ ವನ್ಯ ಪ್ರಾಣಿಗಳು ಮತ್ತು ಪಕ್ಷಿಗಳ ಕಳೇಬರವನ್ನು ಹೂಳುವುದು, ಸುಡುವುದನ್ನು ನಿಷೇಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ವಿಜಯಕುಮಾರ್ ಗೋಗಿ ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.
ವನ್ಯಜೀವಿಗಳ ಕಳೇಬರಗಳನ್ನು ಹೂಳುವುದು, ಸುಡುವುದರಿಂದ ಇತರ ಜೀವಿಗಳಿಗೆ ಆಹಾರದ ಸಮಸ್ಯೆಯಾಗುತ್ತದೆ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅಧ್ಯಯನ ವರದಿ ಸಲ್ಲಿಸಿದ್ದರು. ಕಳೇಬರಗಳನ್ನು ಅರಣ್ಯದಲ್ಲೇ ಕೊಳೆಯಲು ಬಿಡುವಂತೆ ಶಿಫಾರಸು ಮಾಡಿದ್ದರು. ಅದರಂತೆ ಸುತ್ತೋಲೆ ಹೊರಡಿಸಲಾಗಿದೆ. ಹುಲಿ ಹೊರತಾಗಿ ಇತರೆಲ್ಲ ಪ್ರಾಣಿ, ಪಕ್ಷಿಗಳ ಕಳೇಬರಗಳಿಗೆ ಇದು ಅನ್ವಯವಾಗಲಿದೆ.
‘ಪ್ರಾಣಿಗಳ ಕಳೇಬರವು ಹೈನಾ, ಮುಳ್ಳು ಹಂದಿಗಳಂತಹ ಪ್ರಾಣಿಗಳಿಗೆ ಕ್ಯಾಲ್ಸಿಯಂನ ಪ್ರಮುಖ ಮೂಲ. ಅವು ಕೊಳೆಯುವ ಸ್ಥಳದಲ್ಲಿ ಸಾರಜನಕ, ರಂಜಕ, ಸೋಡಿಯಂ, ಗಂಧಕ ಮತ್ತಿತರ ರಾಸಾಯನಿಕ ವಸ್ತುಗಳು ಯಥೇಚ್ಛವಾಗಿರುತ್ತವೆ. ಪ್ರಾಣಿಗಳಿಗೆ ಬೇಕಾದ ಪೋಷಕಾಂಶಗಳು ವೃದ್ಧಿಸಲಿವೆ. ಆದ್ದರಿಂದ ಕಳೇಬರಗಳನ್ನು ಕೊಳೆಯಲು ಬಿಡಬೇಕು’ ಎಂದು ಸಂಜಯ್ ಗುಬ್ಬಿ ಸಲಹಾ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.