ADVERTISEMENT

ಬೆಳಗಾವಿಗೆ ಹೋಗಿಯೇ ತೀರುತ್ತೇವೆ: ಸಿಎಂಗೆ ‘ಮಹಾ’ಸಚಿವರ ಸವಾಲು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 21:09 IST
Last Updated 2 ಡಿಸೆಂಬರ್ 2022, 21:09 IST
ಚಂದ್ರಕಾಂತ ಪಾಟೀಲ
ಚಂದ್ರಕಾಂತ ಪಾಟೀಲ   

ಬೆಳಗಾವಿ: ‘ಡಿಸೆಂಬರ್‌ 6ಕ್ಕೆ ಬೆಳಗಾವಿಗೆ ಹೋಗಿಯೇ ತೀರುತ್ತೇವೆ. ಕರ್ನಾಟಕದ ಮುಖ್ಯಮಂತ್ರಿ ಹೇಳಿಕೆಗೆ ಪ್ರತ್ಯುತ್ತರ ನೀಡಲೆಂದೇ ಹೋಗುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್ ದೇಸಾಯಿ ಸವಾಲು ಹಾಕಿದ್ದಾರೆ.

ಮುಂಬೈನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಕಾಂತ ಪಾಟೀಲ, ‘ಗಡಿ ವಿವಾದದ ಕಾರಣ ತ್ವೇಷಮಯ ವಾತಾವರಣವಿದೆ. ಈಗ ಬರಬೇಡಿ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರ
ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. ನಾನು ಯಾರಿಗೂ ಹೆದರುವವನಲ್ಲ. ಅಲ್ಲಿಗೆ ಹೋಗಿಯೇ ಉತ್ತರ ಕೊಡುತ್ತೇನೆ. ಛತ್ರಪತಿ ಶಿವಾಜಿ ಹಾಗೂ ಡಾ.ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿಯೇ ತೀರುತ್ತೇನೆ’ ಎಂದು ಘೋಷಿಸಿದ್ದಾರೆ.

ಸ್ಥಳದಲ್ಲಿದ್ದ ರಾಜ್ಯಸಭೆ ಸದಸ್ಯ ಸಂಜಯ್‌ ರಾವುತ್‌ ಅವರೂ, ‘ಗಡಿ ಉಸ್ತುವಾರಿ ಸಚಿವರು ಬೆಳಗಾವಿಗೆ ಹೋಗಲೇಬೇಕು. ಅವರಿಗೆ ಆಗದಿದ್ದರೆ ನಾನೇ ಹೋಗಿ ತೋರಿಸುತ್ತೇನೆ’ ಎಂದಿದ್ದಾರೆ.

ADVERTISEMENT

‘ಗಡಿ ವಿಚಾರ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ದೊಂಬಿ ಸೃಷ್ಟಿಸುವ ಉದ್ದೇಶದಿಂದಲೇ ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬರುತ್ತಿದ್ದಾರೆ. ಇವರ ಧೋರಣೆಯನ್ನು ಈಗಲಾದರೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮತಿ ಅಧ್ಯಕ್ಷ ಅಶೋಕ ಚಂದರಗಿ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.