ADVERTISEMENT

ತಂದೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:57 IST
Last Updated 22 ಜುಲೈ 2021, 16:57 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ವಯಸ್ಸು ಅಧಿಕಾರ ನಡೆಸಲು ಮಾನದಂಡವಲ್ಲ. ಎಲ್‌.ಕೆ. ಅಡ್ವಾಣಿ ಸೇರಿ ಹಲವರು ವಿಭಿನ್ನ ಕಾರಣಗಳಿಗಾಗಿ ಹಿಂದೆ ಸರಿದಿದ್ದಾರೆ. ಹೈಕಮಾಂಡ್‌ ವಯಸ್ಸು ಲೆಕ್ಕಿಸದೇ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅವರು ಪಕ್ಷ ನೀಡುವ ಸೂಚನೆ ಪಾಲಿಸುತ್ತಾರೆ ಎನ್ನುವ ಮೂಲಕ ಸಂಸದ ಬಿ.ವೈ.ರಾಘವೇಂದ್ರ ತಮ್ಮ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸುಳಿವು ನೀಡಿದರು.

ಶಿಕಾರಿಪುರದಲ್ಲಿ ಅವರು ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು.

ತಂದೆ ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರು. ಯಾವಾಗಲೂ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡವರು. ಪಕ್ಷದ ಶಿಸ್ತಿನ ಸಿಪಾಯಿಯಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಪಕ್ಷಕ್ಕೆ ಸದಾ ನಿಷ್ಠೆ ತೋರಿದ್ದಾರೆ. ಪಕ್ಷ ಎಲ್ಲವನ್ನೂ ನೀಡಿದೆ. ಅವರನ್ನು ಬೆಳೆಸಿ, ಸಂಸ್ಕಾರ ಕಲಿಸಿ, ಮಾರ್ಗದರ್ಶನ ಕೊಟ್ಟಿದೆ. ಹಾಗಾಗಿಯೇ ಅವರು ಇಷ್ಟು ವರ್ಷಗಳು ಜನಹಿತ ಕೆಲಸ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ADVERTISEMENT

ಪಕ್ಷದ ಕಾರ್ಯಕರ್ತ ಎಂದಿಗೂ ಮಾಜಿ ಅಲ್ಲ

ತಂದೆಯವರು ಅಟಲ್ ಜೀ ಮಾತು ಸದಾ ಸ್ಮರಿಸುತ್ತಿದ್ದರು. ಯಾವುದೇ ಸ್ಥಾನ ಶಾಶ್ವತವಲ್ಲ. ಎಲ್ಲವೂ ಒಂದಲ್ಲ ಒಂದು ದಿನ ಮಾಜಿ ಆಗಲೇಬೇಕು. ಎಲ್ಲವೂ ಮಾಜಿ ಆಗಬಹುದು. ಆದರೆ, ಕಾರ್ಯಕರ್ತನ ಸ್ಥಾನ ಮಾಜಿ ಆಗುವುದಿಲ್ಲ ಎಂದು ಅವರು ಹೇಳುತ್ತಿದ್ದರು ಎಂದು ಸ್ಮರಿಸಿದರು.

ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧ: ‘ಎಲ್ಲಾ‌ ನಿರ್ಧಾರವನ್ನೂ ಯೋಚಿಸಿಯೇ ತೆಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಪಕ್ಷಕ್ಕೆ ಲಕ್ಷಾಂತರ ಕಾರ್ಯಕರ್ತರನ್ನು ಸೆಳೆದವರು. ಅವರ ನಿರ್ಧಾರವೇ ನಮ್ಮ ನಿರ್ಧಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.