ADVERTISEMENT

ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಯಾವ ನೈತಿಕ ಹಕ್ಕಿದೆ?–ಸಿದ್ದರಾಮಯ್ಯ

2 ವರ್ಷಗಳಿಂದ 'ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡದ ಬಿಜೆಪಿ ಸರ್ಕಾರದ ನಡೆಗೆ ಸಿದ್ದರಾಮಯ್ಯ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 8:15 IST
Last Updated 20 ಆಗಸ್ಟ್ 2020, 8:15 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: 'ಎರಡು ವರ್ಷಗಳಿಂದ ಪ್ರತಿಷ್ಠಿತ ‘ದೇವರಾಜ ಅರಸು ಪ್ರಶಸ್ತಿ’ ಪ್ರದಾನ ಮಾಡದೆ ನಾಡಿನ ಹೆಮ್ಮೆಯ ನಾಯಕನಿಗೆ ಅಗೌರವ ತೋರಿದ ರಾಜ್ಯ ಬಿಜೆಪಿ ಸರ್ಕಾರದ ನಡೆ ಖಂಡನೀಯ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗುರುವಾರ ಟ್ವೀಟ್‌ ಮಾಡಿರುವ ಅವರು, ‘ಅರಸು ಅವರಿಗೆ ಅಗೌರವ ತೋರಿದ ಮುಖ್ಯಮಂತ್ರಿಗೆ, ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಯಾವ ನೈತಿಕ ಹಕ್ಕಿದೆ’ ಎಂದೂ ಪ್ರಶ್ನಿಸಿದ್ದಾರೆ.

‘ಡಿ.ದೇವರಾಜ ಅರಸು ಅವರ ಮೇಲೆ ನಿಮಗೆ ಒಂದಿಷ್ಟಾದರೂ ಗೌರವ ಇದ್ದರೆ ಮೊದಲು ಅವರು ಜಾರಿಗೆ ತಂದಿದ್ದ ಉಳುವವನನ್ನೇ ಭೂ ಒಡೆಯನನ್ನಾಗಿ ಮಾಡುವ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ‌ ಮಾಡಿ ಉಳ್ಳವನಿಗೆ ಭೂಮಿ ನೀಡಲು ಹೊರಟಿರುವ ನಿಮ್ಮ ತೀರ್ಮಾನವನ್ನು ಹಿಂದಕ್ಕೆ ಪಡೆಯಿರಿ’ ಎಂದೂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ADVERTISEMENT

‘ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆ ಮೂಲಕ ಸಮಸಮಾಜ ನಿರ್ಮಾಣಕ್ಕೆ ಭದ್ರಬುನಾದಿ ಹಾಕಿಹೋದ ಪರಿವರ್ತನೆಯ ಹರಿಕಾರ ದಿವಂಗತ ಡಿ. ದೇವರಾಜ ಅರಸು ಅವರಿಗೆ, ಸಾಮಾಜಿಕ ನ್ಯಾಯದ ಬಂಡಿಯನ್ನು ಮುನ್ನಡೆಸುವ ಕಾಯಕಕ್ಕೆ ಕೈಜೋಡಿಸುವ ಮೂಲಕ ನಾವೆಲ್ಲರೂ ಹುಟ್ಟುಹಬ್ಬದ ಶುಭಾಶಯ ಕೋರೋಣ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಟೆಲಿಕಾಂ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ್ ರಾಜ್, ಮತದಾನ ವಯಸ್ಸಿನ ಇಳಿಕೆ ಮೊದಲಾದ ಪುರೋಗಾಮಿ ಕಾರ್ಯಕ್ರಮಗಳ ಮೂಲಕ ಬಲಶಾಲಿಯಾದ ಆಧುನಿಕ ಭಾರತ ಕಟ್ಟಿದ, ನಮಗೆಲ್ಲ ಅಭಿವೃದ್ದಿಯ ದಾರಿ ತೋರಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಅವರಿಗೂ ಹುಟ್ಟುಹಬ್ಬದ ದಿನದ ನಮನಗಳು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.